ಮನೆ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ

0

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲಾ-ಕಾಲೇಜುಗಳ ಜಾಗದ ಸುತ್ತಲೂ ಕಾಂಪೌಂಡ್ ಹಾಕಿಸಿ ಸಂರಕ್ಷಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

Join Our Whatsapp Group

ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಲಯನ್ಸ್ ಸಂಸ್ಥೆಯವರು ಕಟ್ಟಿಸಿಕೊಡುತ್ತಿರುವ ಶೌಚಾಲಯ,ಕಾಂಪೌಂಡ್,ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಶಾಲೆಗಳ ಸುತ್ತಮುತ್ತಲ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಬೇಕು. ಅದಕ್ಕೆ ತಕ್ಕಂತೆ ಸ್ಕೆಚ್, ಖಾತೆ ಮಾಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಸೇರಿ ಆಯಾಯ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಕುಳಿತು ಬೇಗನೆ ಕೆಲಸ ಮುಗಿಸಬೇಕು ಎಂದು ಹೇಳಿದರು. ಬಡವರು, ಶ್ರೀಮಂತರ ಮಕ್ಕಳು ಎಂಬುದನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಶಿಕ್ಷಕರು ಜ್ಞಾನಿಗಳು, ಸಮಾಜದ ಆಗು-ಹೋಗುಗಳು ಸೇರಿದಂತೆ ಎಲ್ಲವನ್ನು ತಿಳಿದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಿಕ್ಕ ಅವಧಿಯಲ್ಲಿ ಸರ್ಕಾರಿ ಪದವಿ ಪೂರ್ವ,ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಗಮನಹರಿಸಿದ್ದೆ. ೩೯೩ ಪ್ರಾಂಶುಪಾಲರನ್ನು ನೇಮಕ ಮಾಡುವ ಜತೆಗೆ ಕಟ್ಟಡ, ಶೌಚಾಲಯ, ಗ್ರಂಥಾಲಯ,ಆಡಿಟೋರಿಯಂಗಳನ್ನು ನಿರ್ಮಾಣ ಮಾಡಿದ್ದೇವು. ರಾಜ್ಯದ ಬಹುತೇಕ ಕಾಲೇಜುಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದುವಂತೆ ಮಾಡಿದ್ದೇನೆ ಎಂದರು.

ಗ್ರಾಮಸ್ಥರು ನಮ್ಮೂರಿನ ಶಾಲೆಗಳ ಅಭಿವೃದ್ಧಿ ಬಗ್ಗೆ ಯೋಚಿಸಬೇಕು. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು. ಜಿಪಂ ಸದಸ್ಯರಾಗಿ ಆಯ್ಕೆಯಾದ ದಿನದಿಂದ ಇಲ್ಲಿಯವರೆಗೂ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದ್ದೇನೆ. ಯಾವುದೇ ಊರಾಗಲೀ,ಯಾವುದೇ ವಿಚಾರವಾಗಲೀ ನಾನು ರಾಜಕೀಯ ಮಾಡಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೇರೆಯವರು ರಾಜಕಾರಣ ಮಾಡುತ್ತಾರೆ. ಆದರೆ,ನಾನು ಅದಕ್ಕೆ ತಲೆಹಾಕಲ್ಲ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಬರೀ ಬಡವರ ಮಕ್ಕಳು ಮಾತ್ರ ಓದುತ್ತಾರೆ. ಹಣವುಳ್ಳವರು ದೊಡ್ಡ ದೊಡ್ಡ ಕಾನ್ವೆಂಟ್‌ಗಳಲ್ಲಿ ಓದಿಸುತ್ತಾರೆ.ಶಿಕ್ಷಕರು ಮಕ್ಕಳನ್ನು ಮತ್ತು ಶಾಲೆಯನ್ನು ತಮ್ಮ ಮಕ್ಕಳೆಂದು ಕಾಣಬೇಕು. ಮುಖ್ಯೋಪಾಧ್ಯಾಯರು ತಾಯಿಯ ಸಮಾನದಲ್ಲಿ ನಿಂತು ಸಹ ಶಿಕ್ಷಕರನ್ನು ಮಕ್ಕಳಂತೆ ಕಂಡುಒಟ್ಟಿಗೆ ಹೋಗಬೇಕು. ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲೆ ನಿಂತಿರುವುದನ್ನು ನಾವು ಗಮನಿಸಬೇಕಾಗಿದೆ ಎಂದರು.

ಜನರ ಸೇವೆ ಮಾಡಲು ನನಗೊಂದು ಅವಕಾಶ ನೀಡಿರುವಂತೆ ಮಕ್ಕಳ ಸೇವೆ ಮಾಡಲು ನಿಮಗೆ ಅವಕಾಶ ಸಿಕ್ಕಿದೆ. ದೈವ ಪೂಜೆ ಎನ್ನುವಂತೆ ಮಕ್ಕಳನ್ನು ನೋಡಿಕೊಳ್ಳಬೇಕು. ಕ್ಷೇತ್ರದಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಮೊದಲಿನಿಂದಲೂ ಗಮನಹರಿಸುತ್ತಾ ಬಂದಿದ್ದೇನೆ. ಮಕ್ಕಳ ಕ್ರೀಡಾಂಗಣ,ಆಟದ ಮೈದಾನ,ಶೌಚಾಲಯಗಳು,ಕುಡಿಯುವ ನೀರಿನ ಘಟಕವನ್ನು ಒದಗಿಸಲಾಗುತ್ತಿದೆ. ಈಗ ಶಾಲೆಗಳ ಜಾಗವನ್ನು ರಕ್ಷಣೆ ಮಾಡುವ ಕಡೆಗೆ ಗಮನಹರಿಸಲಾಗಿದೆ ಎಂದು ಭರವಸೆ ನೀಡಿದರು.

ಲಯನ್ ಸಂಸ್ಥೆಯವರು ಸ್ವಯಂಪ್ರೇರಣೆಯಿಂದ ಮಂಡಕಳ್ಳಿ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿ ಆಯ್ಕೆ ಮಾಡಿಕೊಂಡಿರುವುದು ಸಂತೋಷದ ವಿಚಾರವಾಗಿದೆ. ಕಾಂಪೌಂಡ್,ಕುಡಿಯುವ ನೀರಿನ ಘಟಕ, ಶೌಚಾಲಯದ ಕಟ್ಟಡದ ಜತೆಗೆ ಮಕ್ಕಳ ಆಟೋಟಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುತ್ತಿರುವುದರಿಂದ ಮಕ್ಕಳಿಗೂ ಅನುಕೂಲವಾಗಲಿದೆ. ಶಿಕ್ಷಕರು ಮರಗಿಡಗಳನ್ನು ನೆಟ್ಟು ಸುಂದರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲಾಗುವುದು. ಶಾಲೆಯು ಮಾದರಿಯಾಗಿ ರೂಪುಗೊಂಡರೆ ಆಯ್ಕೆ ಮಾಡಬಹುದು ಎಂದರು. ಡಿಡಿಪಿಐ ಜವರೇಗೌಡ, ಮುಖಂಡರಾದ ಲೋಕೇಶ್, ಬೀರೇಗೌಡ,ರಾಮೇಗೌಡ,ಚಂದ್ರಶೇಖರ್, ಲಯನ್ಸ್ ಸಂಸ್ಥೆಯ ಮಮತಾ, ಸುಬ್ರಹ್ಮಣ್ಯ, ಮೂರ್ತಿ,ಜಯಕುಮಾರ್,ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಲಯನ್ಸ್ ಸಂಸ್ಥೆಯವರು ಕಟ್ಟಿಸಿಕೊಡುತ್ತಿರುವ ಶೌಚಾಲಯ,ಕಾಂಪೌಂಡ್,ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಶಾಸಕ ಜಿ.ಟಿ.ದೇವೇಗೌಡ ಶಂಕುಸ್ಥಾಪನೆ ನೆರವೇರಿಸಿದರು.ಡಿಡಿಪಿಐ ಜವರೇಗೌಡ, ಮುಖಂಡರಾದ ಲೋಕೇಶ್, ಬೀರೇಗೌಡ,ರಾಮೇಗೌಡ,ಚಂದ್ರಶೇಖರ್, ಲಯನ್ಸ್ ಸಂಸ್ಥೆಯ ಮಮತಾ, ಸುಬ್ರಹ್ಮಣ್ಯ, ಮೂರ್ತಿ,ಜಯಕುಮಾರ್,ಶ್ರೀನಿವಾಸ್ ಹಾಜರಿದ್ದರು.