ಮನೆ ರಾಜ್ಯ ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ:  ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ:  ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು(Mysuru): ರಾಜ್ಯದ ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಎಷ್ಟೋ ವಿಭಾಗಗಳಲ್ಲಿ ಏಕ ಅಧ್ಯಾಪಕರಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ವತಿಯಿಂದ ಅಕ್ಕಮಹಾದೇವಿ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ವಿವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅಧ್ಯಾಪಕರ ಸಂಖ್ಯೆ ಕುಂಠಿತಗೊಂಡಿದೆ. ಎಷ್ಟೊ ವಿಭಾಗದಲ್ಲಿ ಒಬ್ಬ ಅಧ್ಯಾಪಕರು ಇದ್ದಾರೆ. ಮತ್ತೆ ಕೆಲವು ವಿಭಾಗದಲ್ಲಿ ಕಾಯಂ ಅಧ್ಯಾಪಕರೆ ಇಲ್ಲ.  ಸರಕಾರದಿಂದ ಅನುದಾನದ ನೆರವು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧನೆ ಎಂಬುದು ಪ್ರಯತ್ನದಿಂದಾಗಿ ಸಿಗುವಂತದ್ದು. ನಮ್ಮ ಜೀವನದಲ್ಲಿ ಶಿಸ್ತು ಇದ್ದರೆ ಎಲ್ಲವೂ ಸಿಗುತ್ತದೆ. ಬದುಕಿನ ಒಂದೊಂದು ಹಂತದಲ್ಲೂ ಒಂದೊಂದು ಬಗೆಯ ಸವಾಲು ಇರುತ್ತದೆ. ಸದ್ಯ ಪ್ರೊ.ಬಿ.ಕೆ.ತುಳಸಿಮಾಲಾ ಅವರು ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. 30 ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ವಿವಿ ಚಿಕ್ಕದಾದರೂ ಅದರ ಆಡಳಿತ ವ್ಯಾಪ್ತಿ ದೊಡ್ಡದು. ಪ್ರೊ.ಬಿ.ಕೆ.ತುಳಸಿಮಾಲಾ ಅವರು ಎರಡು ವರ್ಷ ಕುಲಪತಿ ಹಾಗೂ ಎರಡು ವರ್ಷ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಓದುವ ಅಭ್ಯಾಸ ಇತ್ತು. ಶಿಕ್ಷಕ ಸಾಧಕನಾಗಿದ್ದಾಗ ಮಾತ್ರ ಉನ್ನತ ಹುದ್ದೆ ಸಿಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಪ್ರೊ.ಬಿ.ಕೆ.ತುಳಸಿಮಾಲಾ ಅವರ ಬದುಕು-ಸಾಧನೆ ಬಗ್ಗೆ 17 ನಿಮಿಷಗಳ ವಿಡಿಯೋ ಪ್ರಸಾರವಾಯಿತು. ಪೂಜಾ ಭಗವತ್ ಮೊಮೊರಿಯಲ್ ಮಹಾಜನ ಪೋಸ್ಟ್ ಗ್ರಾಜುಯೇಟ್ ಸೆಂಟರ್‌ ನ ನಿರ್ದೇಶಕರಾದ ಪ್ರೊ.ಸಿ.ಕೆ.ರೇಣುಕಾಚಾರ್ಯ, ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಮುಖ್ಯಸ್ಥರಾದ ಪ್ರೊ.ಮಹೇಶ್ ಎಂ. ಸೇರಿದಂತೆ ಇತರರು ಇದ್ದರು.