ನೆಲಮಂಗಲ : ರಸ್ತೆ ದುರಸ್ತಿ ವಿಚಾರಕ್ಕೆ 2 ಕುಟುಂಬಗಳ ನಡುವೆ ನಡೆದ ಗಲಾಟೆ ವೇಳೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಬೆಂಗಳೂರಿನ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜನಸಾಮಾನ್ಯರು ಓಡಾಡುವ ಅನುಮತಿ ರಸ್ತೆ ಸರಿ ಮಾಡಿಸುವ ವಿಚಾರದಲ್ಲಿ 2 ಕುಟುಂಬಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ದೊಣ್ಣೆ ಕಲ್ಲುಗಳಿಂದ ಗ್ರಾಮದ ನಾಗರತ್ನ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರೇಮ್ ಕುಮಾರ್, ಜಯಮ್ಮ, ಮಹಿಮೆಗೌಡ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಗ್ರಾಮದ ರಸ್ತೆಯಲ್ಲಿ ಮಳೆಯಿಂದ ಗುಂಡಿಗಳು ಬಿದ್ದಿದ್ದು, ಜನ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ರಸ್ತೆಗೆ ಮಣ್ಣು ಹಾಕಿ ಸರಿ ಮಾಡಲು ಜನರೇ ಮುಂದಾಗಿದ್ದರು. ರಸ್ತೆ ದುರಸ್ತಿ ಮಾಡದಂತೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನಮ್ಮ ಆರೋಪಿಸಿದ್ದಾರೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.















