ನವದೆಹಲಿ : ಬಿಹಾರ ಚುನಾವಣೆಯಲ್ಲಿ ಕಮಲ ಗೆಲುವಿನ ಹಿಂದೆ ಕ್ಯಾಂಪೇನ್ ಕಮಾಲ್ ಮಾಡಿದೆ. ಈ ಚುನಾವಣೆಯಲ್ಲಿ ಬಿಹಾರ ಮಾತ್ರವಲ್ಲ ಕೇಂದ್ರ ಸರ್ಕಾರದ ಮೇಲೂ ಪರಿಣಾಮ ಬೀರುವ ಕಾರಣ ಬಹಳ ಲೆಕ್ಕಾಚಾರ ಮಾಡಿಯೇ ಪ್ರಚಾರ ಮಾಡಿತ್ತು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ಹಿನ್ನಡೆಯಾಗಿದ್ದರೂ ಅಧಿಕಾರಕ್ಕೆ ಏರಲು ಕಾರಣವಾಗಿದ್ದು ಬಿಹಾರದಲ್ಲಿ ಎನ್ಡಿಎಗೆ ನೀಡಿದ ಬಹುಮತ. ಒಟ್ಟು 40 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಎನ್ಡಿಎ ಜಯಗಳಿಸಿತ್ತು. ಬಿಜೆಪಿ 12, ಜೆಡಿಯು 12, ಎಲ್ಜೆಪಿ 5, ಹಿಂದೂಸ್ತಾನಿ ಅವಾಮಿ ಮೋರ್ಚ 1 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೆ ಅದು ಕೇಂದ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಈ ರೀತಿ ಯಾವುದೇ ಹಿನ್ನಡೆಯಾಗದೇ ಇರಲು ಮೊದಲು ಬಹಳ ಚೆನ್ನಾಗಿ ಸ್ಥಾನಗಳನ್ನು ಹಂಚಿಕೆ ಮಾಡಿತ್ತು ಮತ್ತು ಭಿನ್ನಾಭಿಪ್ರಾಯ ಬಂದರೂ ಅಮಿತ್ ಶಾ ಮಧ್ಯಪ್ರವೇಶಿಸಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದರು.
ಚುನಾವಣಾ ದಿನಾಂಕ ಘೋಷಣೆಯಾದ ನಂತರ ಯಾವ ಭಾಗಕ್ಕೆ ಯಾರು ಪ್ರಚಾರಕ್ಕೆ ತೆರಳಬೇಕು. ಸ್ಟಾರ್ ಪ್ರಚಾರಕರ ಪಟ್ಟಿಯನ್ನು ತಯಾರಿಸಿತ್ತು. ಹಿಂದಿ ಬೆಲ್ಟ್ ಆಗಿರುವ ಕಾರಣ ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳನ್ನು ಪ್ರಚಾರಕ್ಕೆ ಇಳಿಸಿತ್ತು. ಅದರಲ್ಲೂ ಮುಖ್ಯವಾಗಿ ಯಾದವ ಸಮಾಜದವರು ಆರ್ಜೆಡಿಯ ಮತದಾರರು. ಹೀಗಾಗಿ ಈ ಮತದಾರರನ್ನು ಸೆಳೆಯಲು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಪ್ರಚಾರಕ್ಕೆ ಇಳಿಸಿತ್ತು.
ಬಿಜೆಪಿ ಒಟ್ಟು 565 ರ್ಯಾಲಿ ಮಾಡಿತ್ತು. ಪ್ರಧಾನಿ ಮೋದಿ 14 ಸಮಾವೇಶ ಮತ್ತು 1 ರೋಡ್ ಶೋ ಮಾಡುವ ಮೂಲಕ 115 ಕ್ಷೇತ್ರ ಕವರ್ ಮಾಡಿದ್ದರು. ಅಮಿತ್ ಶಾ 36 ಕಾರ್ಯಕ್ರಮ ಮಾಡಿ 160ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.
ಭೋಜ್ಪುರಿ ನಟ ಪವನ್ ಸಿಂಗ್, ಮನೋಜ್ ತಿವಾರಿ ತಮ್ಮ ಹೆಸರಿನಿಂದಲೇ ಜನಾಕರ್ಷಣೆ ಮಾಡುವು ಸಾಮರ್ಥ್ಯ ಹೊಂದಿದ್ದಾರೆ. ಇವರನ್ನು ಯಶಸ್ವಿಯಾಗಿ ಬಳಸಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬೆಳೆಯನ್ನು ತೆಗೆದಿದೆ. ಈ ಮೂಲಕ ಮಹಾಘಟಬಂಧನ್ ಉಡೀಸ್ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿಯೇ ಕಣಕ್ಕೆ ಇಳಿದಿತ್ತು.















