ಕೊಪ್ಪಳ : ಪೌರಾಣಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪದ ತುಂಗಭದ್ರ ನದಿ ತಟದಲ್ಲಿ ವಿರ್ಜಂಭಣೆಯಿಂದ ತುಂಗಾರತಿ ಮಹೋತ್ಸವ ಜರುಗಿತು. ಇದೇ ಮೊದಲ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರ ನದಿತೀರದಲ್ಲಿ ತುಂಗಭದ್ರ ಆರತಿ ಮಹೋತ್ಸವ ನಡೆಯಿತು.
ಗಂಗಾ ಆರತಿ ಮಹೋತ್ಸವದಲ್ಲಿ ಭಾಗಿಯಾಗಿದ್ದ 15 ಅರ್ಚಕರು ತುಂಗಭದ್ರಾ ಆರತಿ ಮಹೋತ್ಸವ ನಡೆಸಿಕೊಟ್ಟರು. ಮಹೋತ್ಸವ ಅಕ್ಷರಶಃ ವಾರಣಾಸಿಯ ಗಂಗಾರತಿ ನೆನಪಿಸುವಂತಿತ್ತು.
ತುಂಗಭದ್ರಾ ಆರತಿಗಾಗಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಸುಮಾರು ಎರಡು ಸಾವಿರ ಆರತಿಗಳನ್ನು ಭಕ್ತರಿಗೆ ಉಚಿತ ನೀಡಲಾಗಿತ್ತು.
ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ, ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ, ಮಾಹಿಳೆಯರಿಂದ ವಿಶೇಷ ಕುಂಭ ಮೆರವಣಿಗೆ, ನದಿ ತೀರದಲ್ಲಿ ದೇವಸ್ಥಾನದ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜೆ ಕಾರ್ಯಕ್ರಮ ನಡೆಯಿತು.
ಮೊದಲು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ ನದಿ ತಟದ ವೇದಿಕೆಯಲ್ಲಿ ಹೊಸಪೇಟೆಯ ಅಂಜಲಿ ಕಲಾ ತಂಡದಿಂದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡಯಿತು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕೆ.ರಾಜಶೇಖರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು.















