ಭುವನೇಶ್ವರ: ಅಪ್ಪ-ಅಮ್ಮನಿಗೆ ಬೇಡವಾದ ಮಗು ಕಸದಬುಟ್ಟಿಯನ್ನೋ, ರಸ್ತೆಯ ಬದಿಯನ್ನೋ ಸೇರುತ್ತದೆ. ಇನ್ನು ಕೆಲವರು ಹೆಣ್ಣುಮಗು ಹುಟ್ಟಿತೆಂಬ ಕಾರಣಕ್ಕೆ ಅದನ್ನು ಕೊಲ್ಲುವವರೂ ಇದ್ದಾರೆ. ಆದರೆ, ಒಡಿಶಾದ ಮಹಿಳೆ ರಾಜಲಕ್ಷ್ಮಿ ಕರ್ ಎಂಬುವವರಿಗೆ ಮಕ್ಕಳೆಂದರೆ ಜೀವ. ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ಅವರಿಗೆ 13 ವರ್ಷದ ಹಿಂದೆ ರಸ್ತೆ ಬದಿಯಲ್ಲಿ 3 ದಿನದ ಹೆಣ್ಣುಮಗುವೊಂದು ಸಿಕ್ಕಿತ್ತು. ಕಾನೂನು ಪ್ರಕಾರವೇ ಆ ಮಗುವನ್ನು ದತ್ತು ಪಡೆದ ಅವರು ಆ ಅನಾಥ ಮಗುವಿಗೆ ತಾಯಿಯಾದರು. ಅಮ್ಮನಿಗೆ ಬೇಡವಾಗಿ ಬಿದ್ದಿದ್ದ ಆ ಹೆಣ್ಣು ಶಿಶುವಿನ ಜೀವನಕ್ಕೆ ಆಧಾರವಾದರು. ಒಳ್ಳೆಯ ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣವನ್ನೂ ಕೊಡಿಸಿದರು. 13 ವರ್ಷದ ಆಕೆ ಈಗ 8ನೇ ಕ್ಲಾಸ್ ಓದುತ್ತಿದ್ದಳು. ಮನೆಯಲ್ಲಿ ಎಷ್ಟೇ ಒಳ್ಳೆಯ ಸಂಸ್ಕಾರ ಹೇಳಿಕೊಟ್ಟರೂ ಮನೆಯಿಂದ ಹೊರಗೆ ಹೋದಾಗ ಆಕೆ ಹುಡುಗರೊಂದಿಗೆ ಓಡಾಡುತ್ತಾ, ಮಜಾ ಮಾಡುತ್ತಾ, ಕ್ಲಾಸ್ಗೆ ಬಂಕ್ ಮಾಡುತ್ತಾ ಸ್ವೇಚ್ಛಾಚ್ಛಾರದ ಜೀವನ ನಡೆಸುತ್ತಿದ್ದಳು.
ರಾಜಲಕ್ಷ್ಮಿ ಮಗಳನ್ನು ಕರೆದು ಬುದ್ಧಿ ಹೇಳಿದಳು. ಅಮ್ಮ ಬುದ್ಧಿ ಹೇಳಿದಾಗ ಕೋಪಗೊಂಡ 13 ವರ್ಷದ ಬಾಲಕಿ ನನಗೆ ಬುದ್ಧಿ ಹೇಳಲು ನೀನೇನು ನನ್ನ ಹೆತ್ತ ತಾಯಿಯೇ? ಎಂದು ಕೇಳಿ ಗಲಾಟೆ ಮಾಡಿದ್ದಳು. ಹೆತ್ತ ಮಗಳಿಗಿಂತ ಹೆಚ್ಚಾಗಿ ಸಾಕಿದ್ದರೂ ಮಗಳು ಈ ರೀತಿ ವರ್ತಿಸಿದ್ದು ರಾಜಲಕ್ಷ್ಮಿಗೆ ಬೇಸರ ತಂದಿತ್ತು. ತನ್ನ ತಾಯಿ ಈ ರೀತಿ ಹೇಳುತ್ತಿದ್ದಾರೆಂದು ಶಾಲೆಯಲ್ಲಿ ತನ್ನ ಇಬ್ಬರು ಬಾಯ್ಫ್ರೆಂಡ್ಗೆ ಹೇಳಿದ ಆ ಬಾಲಕಿ ಅವರ ಜೊತೆ ಸೇರಿ ತಾಯಿಯನ್ನೇ ಕೊಲ್ಲಲು ಪ್ಲಾನ್ ಮಾಡಿದ್ದಳು. ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ತಾಯಿಯನ್ನು ಕೊಲ್ಲಲು ಯೋಚಿಸಿದ ಆಕೆ ಏಪ್ರಿಲ್ 29ರಂದು ತನ್ನ ಇಬ್ಬರು ಗೆಳೆಯರ ಸಹಾಯದಿಂದ ತನ್ನ ಸಾಕು ತಾಯಿಯನ್ನು ಕೊಂದಿದ್ದಾಳೆ. ಅನಾಥವಾಗಿ ಬಿದ್ದಿದ್ದ ಮಗುವಿಗೆ ಆಸರೆ, ಶಿಕ್ಷಣ, ಸಮಾಜದಲ್ಲಿ ಐಡೆಂಟಿಟಿ ನೀಡಿದ ತಪ್ಪಿಗೆ ರಾಜಲಕ್ಷ್ಮಿ ಅದೇ ಮಗುವಿನಿಂದ ಕೊಲೆಯಾಗಿದ್ದಾರೆ.
ಪೊಲೀಸರನ್ನು ಉಲ್ಲೇಖಿಸಿದ ವರದಿಗಳ ಪ್ರಕಾರ, ಕಳೆದ ತಿಂಗಳು ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ಆ ಮಹಿಳೆಯನ್ನು ಕೊಲ್ಲಲು ಆ ಹುಡುಗಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದಳು ಎಂದು ಹೇಳಲಾಗಿದೆ. ಇಬ್ಬರು ಹುಡುಗರ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನು ರಾಜಲಕ್ಷ್ಮಿ ವಿರೋಧಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಹಾಗೇ, ಆಕೆ ಸಾಕು ತಾಯಿಯಾಗಿದ್ದರಿಂದ ಆಕೆಯ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಈ ಕೊಲೆ ಮಾಡಿದ್ದಾಳೆಂಬ ಆರೋಪವೂ ಇದೆ.
ಆ ಬಾಲಕಿ ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಂತರ ದಿಂಬುಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವಳು ಸತ್ತಿದ್ದಾಳೆಂದು ಘೋಷಿಸಲಾಯಿತು. ಮರುದಿನ, ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿಸಲಾಯಿತು. ರಾಜಲಕ್ಷ್ಮಿ ಅವರಿಗೆ ಈ ಮೊದಲೂ ಒಮ್ಮೆ ಹೃದಯಾಘಾತ ಉಂಟಾಗಿದ್ದರಿಂದ ಆ ಹುಡುಗಿ ತನ್ನ ತಾಯಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದನ್ನು ಎಲ್ಲರೂ ನಂಬಿದ್ದರು.
ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರಿಗೆ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಆ ಹುಡುಗಿಯ ಮೊಬೈಲ್ ಫೋನ್ ಸಿಕ್ಕಿತು. ಅದರಲ್ಲಿ ಆಕೆ ಹುಡುಗರ ಜೊತೆ ಮಾಡಿದ್ದ ಮೆಸೇಜ್ ಇತ್ತು. ಅದನ್ನು ನೋಡಿದ ನಂತರ ಅಸಲಿ ವಿಷಯ ಬೆಳಕಿಗೆ ಬಂದಿತು. ವಾಟ್ಸಾಪ್ ಮೆಸೇಜ್ನಲ್ಲಿ ಆ ಮೂವರೂ ಕೊಲೆಯ ಪ್ಲಾನ್ ಬಗ್ಗೆ ಚಾಟ್ ನಡೆಸಿದ್ದರು. ಆ ಚಾಟ್ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳು ಮತ್ತು ಹಣವನ್ನು ಕಿತ್ತುಕೊಂಡ ಬಗ್ಗೆ ನಿರ್ದಿಷ್ಟ ಉಲ್ಲೇಖಗಳಿತ್ತು.
ನಂತರ, ಮಿಶ್ರಾ ಮೇ 14ರಂದು ಈ ಸಂಬಂಧ ಪೊಲೀಸ್ ದೂರು ದಾಖಲಿಸಿದರು. ಬಳಿಕ ಮೂವರು ಆರೋಪಿಗಳಾದ 13 ವರ್ಷದ ಹುಡುಗಿ, ದೇವಾಲಯದ ಅರ್ಚಕ ಗಣೇಶ್ ರಾತ್ (21) ಮತ್ತು ಅವನ ಸ್ನೇಹಿತ ದಿನೇಶ್ ಸಾಹು (20) ಅವರನ್ನು ಬಂಧಿಸಲಾಯಿತು. ಈ ಘಟನೆ ಭುವನೇಶ್ವರದಲ್ಲಿಯಷ್ಟೇ ಅಲ್ಲ, ಇಡೀ ದೇಶದ ಜನಮನದಲ್ಲಿ ತೀವ್ರ ಆಘಾತ ಮೂಡಿಸಿದೆ.














