ಮನೆ ಸುದ್ದಿ ಜಾಲ ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ..!

ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ..!

0

ಹುಣಸೂರು : ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗವೊಂದು ವಾಪಸ್ ಕಾಡಿಗೆ ಹೋಗುವ ಸಂಭ್ರಮದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಡುವೆ ಸಿಲುಕಿ ಹಾಕಿಕೊಂಡು ಅಕ್ಷರಶಃ ಮರಣಯಾತನೆ ಅನುಭವಿಸಿದ ಘಟನೆ ಉಡುವೆಪುರ ಗ್ರಾಮದ ಬಳಿ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಈ ಒಂಟಿ ಸಲಗ, ಹಸಿವಿನಿಂದಾಗಿ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿತ್ತು.

ಜಮೀನಿನಲ್ಲಿ ಆನೆಯನ್ನು ಕಂಡ ರೈತರು ಭಯದಿಂದ ಜೋರಾಗಿ ಕೂಗಾಡಿದ್ದಾರೆ. ಜನರ ಚೀರಾಟ ಮತ್ತು ವಾಹನಗಳ ಹಾರ್ನ್ ಸದ್ದಿನಿಂದ ಬೆದರಿದ ಆನೆ, ಗಾಬರಿಯಿಂದ ಕಾಡಿನತ್ತ ಓಡಲಾರಂಭಿಸಿದೆ. ಕಾಡಿನೊಳಗೆ ಪ್ರವೇಶಿಸುವ ಬರದಲ್ಲಿ ಆನೆಯು ರೈಲ್ವೆ ಹಳಿಗಳಿಂದ ನಿರ್ಮಿಸಲಾಗಿದ್ದ ತಡೆಗೋಡೆಯ ಅಡಿಯಿಂದ ನುಸುಳಲು ಪ್ರಯತ್ನಿಸಿದೆ. ಈ ವೇಳೆ ಆನೆಯ ದೇಹವು ಕಂಬಗಳ ನಡುವೆ ಸಿಲುಕಿಕೊಂಡಿದೆ.

ಸುಮಾರು ಹೊತ್ತು ಆನೆಯು ಹೊರಬರಲಾರದೆ ಒದ್ದಾಡಿದ್ದು, ಅದರ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆನೆಗೆ ಯಾವುದೇ ಗಾಯವಾಗದಂತೆ ಜಾಣ್ಮೆಯಿಂದ ಅದನ್ನು ಬಿಡಿಸುವಲ್ಲಿ ಯಶಸ್ವಿಯಾದರು.