ಚಿಕ್ಕಬಳ್ಳಾಪುರ: ಪ್ರೀತಿಗೆ ಜಾತಿ, ಧರ್ಮದ ಗಡಿ ಇಲ್ಲ ಎಂಬಂತೆಯೇ ಇಲ್ಲೊಂದು ಜೋಡಿ ಜಾತಿ ಧರ್ಮಗಳ ಎಲ್ಲೆ ಮೀರಿ ಪ್ರೇಮ ವಿವಾಹವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮುಸ್ಲಿಂ ಯುವತಿಯು ಹಿಂದೂ ಯುವಕನನ್ನು ಪ್ರೀತಿಸಿ ಪ್ರೇಮವಿವಾಹವಾಗಿದ್ದು, ಈ ವಿವಾಹಕ್ಕೆ ಸಹಜವಾಗಿಯೇ ಪೋಷಕರ ವಿರೋಧ ವ್ಯಕ್ತವಾಗಿದೆ. ಇದೀಗ ರಕ್ಷಣೆ ಕೋರಿ ನವಜೋಡಿಯು ಪೊಲೀಸರ ಮೊರೆ ಹೋಗಿದ್ದಾರೆ.
ಯಾಪಲಹಳ್ಳಿಯ ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಯುವತಿ ನಜ್ಮಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಸ್ನೇಹ ಪ್ರೀತಿ ಪ್ರೇಮವಾಗಿದೆ.
ಕಳೆದ 4 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರಿಗೂ ವ್ಯಕ್ತಿತ್ವ ಇಷ್ಟವಾಗಿ ಮದುವೆ ಆಗಲು ತೀರ್ಮಾನಿಸಿದ್ದರು. ಇಬ್ಬರು ಮದುವೆ ಮಾಡಿಕೊಳ್ಳೊದಾಗಿ ಎರಡು ಕಡೆಯ ಮನೆಯಲ್ಲಿ ತಿಳಿಸಿದ್ದಾರೆ. ಇಬ್ಬರದ್ದೂ ಬೇರೆ ಬೇರೆ ಧರ್ಮವಾದ ಕಾರಣ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಯುವತಿಯನ್ನ ಕೆಲಸಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ಹರೀಶಬಾಬು ಮನೆಯಲ್ಲಿ ಒಪ್ಪಿದ್ದಾರೆ. ಆದ್ರೆ, ನಜ್ಮಾ ಮನೆಯಲ್ಲಿ ಒಪ್ಪದೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ಜೋಡಿ ಈ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ.
ವಿರೋಧದ ಬೆನ್ನಲ್ಲೇ ನವಜೋಡಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸಿ ಮೊರೆ ಹೋಗಿದ್ದಾರೆ. ಅಂತರ್ ಧರ್ಮ ಪ್ರೇಮವಿವಾಹದ ಸೂಕ್ಷ್ಮತೆಯನ್ನ ಅರಿತ ಎಸ್ಪಿ ಕುಶಲ್ ಚೌಕ್ಸಿ ಇಬ್ಬರನ್ನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಯುವಕ ಯುವತಿಯ ತಂದೆ ತಾಯಿಯನ್ನ ಕರೆಸಿ ವಿಚಾರ ಮಾಡುವಂತೆ ತಿಳಿಸಿದ್ದರು.
ಕುಟುಂಬದವರ ಜೊತೆ ಹೋಗಲ್ಲ. ನನಗೆ ಹರೀಶ್ ಬೇಕೆಂದು ನಜ್ಮಾ ಪೊಲೀಸರ ಮುಂದೆ ಖಡಕ್ ಆಗಿ ಹೇಳಿದ್ದಾಳೆ. ಇದ್ರಿಂದ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ನಜ್ಮಾ ಹೇಳಿಕೆ ದಾಖಲಿಸಿಕೊಂಡು ಆಕೆಯ ಇಷ್ಟದಂತೆ ಆಕೆಯ ಪ್ರೀಯಕರನ ಜೊತೆ ಕಳುಹಿಸಿಕೊಟ್ಟಿದ್ದಾರೆ. ಯುವತಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ನವಜೋಡಿಗೆ ಯಾವುದೇ ತೊಂದರೆ ಮಾಡದಂತೆ ತಿಳಿ ಹೇಳಿ ಕಳುಹಿಸಿದ್ದಾರೆ.















