ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಮತ್ತೆ ಒಂಟಿ ಸಲಗದ ಉಪಟಳ ಮುಂದುವರೆದಿದ್ದು, ಬೆಳೆ ನಾಳಪಡಿಸುತ್ತಿದೆ. ಇದರಿಂದಾಗಿ ರೈತರು ಆತಂಕದಲ್ಲಿದ್ದಾರೆ.
ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯದಂಚಿನ ತಡೆಗೋಡೆ ದಾಟಿ ಹೊರಬರುತ್ತಿರುವ ಸಲಗ ಚಿಕ್ಕಹೆಜ್ಜೂರು ಗ್ರಾಮದ ಸಿ.ವಿ.ದೇವರಾಜ್ ಅವರ ರಾಗಿ, ಅಲಸಂಡೆ,ಅವರೆ, ಹುರಳಿ ಬೆಳೆ, ಅರುಣ್ ಫಲಭರಿತ ಬಾಳೆ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ.
ಅದು ಮಾತ್ರವಲ್ಲದೇ ತೆಂಗಿನ ಸಸಿಗಳನ್ನು ತಿಂದು ಗಿಡಗಳನ್ನು ಸಿಗಿದು ಹಾಕಿದೆ. ಅಡಿಕೆ ಸಸಿಗಳನ್ನು ತುಳಿದು ನಾಶಪಡಿಸಿದೆ. ರಮೇಶ ಎಂಬವರ ರಾಗಿ, ಹುರುಳಿ, ಸುಮಂತ ಅವರ ಹುರುಳಿ, ಮುದಗನೂರಿನ ಸುಭಾಷ್ ಅವರ ಭತ್ತ ನಾಶಪಡಿಸಿದೆ.
ಸಾಲ-ಸೋಲ ಮಾಡಿ ಬೆಳೆ ಬೆಳೆದಿದ್ದೇವೆ. ಈಗಾಗಳೇ ಅರ್ಧದಷ್ಟು ಬೆಳೆ ನಾಶಪಡಿಸಿದೆ. ಇದೀಗ ಕಟಾವು ಸಮಯವಾಗಿದ್ದು, ಕಟಾವು ಮಾಡಿದ ಬೆಳೆಯೂ ಕೈಗೆ ಸಿಗದಂತಾಗಿದ್ದು, ಬೆಳೆ ಬರುವ ಸಮಯದಲ್ಲಿ ಹಾಗೂ ಬೇಸಿಗೆ ವೇಳೆ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ರಾತ್ರಿ ಕಾವಲಿಗೆ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ಆದರೆ ಈ ಬಾರಿ ಕಾವಲುಗಾರರೇ ಕಾಣುತ್ತಿಲ್ಲ. ಅಧಿಕಾರಿಗಳು ಇನ್ನಾದರೂ ಕಾವಲುಗಾರರನ್ನು ನೇಮಿಸಿ ಆನೆ ಹೊರಬಾರದಂತೆ ಕಾವಲು ಕಾಯಬೇಕೆಂದು ರೈತರು ಆಗ್ರಹಿಸಿದ್ದಾರೆ.















