ಮನೆ ಅಪರಾಧ ತನ್ನ ಪತಿ ಪಾಲಿನ ಆಸ್ತಿ ಕೇಳಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ

ತನ್ನ ಪತಿ ಪಾಲಿನ ಆಸ್ತಿ ಕೇಳಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ

0

ಕಲಬುರಗಿ: ತನ್ನ ಪತಿ ಪಾಲಿನ ಆಸ್ತಿಯನ್ನು ಕೇಳಿದ್ದಕ್ಕೆ ಹಾಡುಹಗಲೇ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ವಿಜಯಲಕ್ಷ್ಮಿ ಮಠಪತಿ ಕೊಲೆಯಾದ ಮಹಿಳೆ.

Join Our Whatsapp Group

ಮೂಲತ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದ ನಿವಾಸಿಯಾಗಿರುವ ವಿಜಯಲಕ್ಷ್ಮಿ, ಕಳೆದ ಕೆಲವು ವರ್ಷಗಳಿಂದ ಪತಿಯೊಂದಿಗೆ ಕಲಬುರಗಿ ನಗರದಲ್ಲಿಯೇ ನೆಲೆಸಿದ್ದರು. ಪತಿ ಮಲ್ಕಯ್ಯಸ್ವಾಮಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ವಿಜಯಲಕ್ಷ್ಮಿ ಮನೆಗೆಲಸ ಮಾಡಿಕೊಂಡಿದ್ದಳು. ದಂಪತಿಗೆ ನಾಲ್ಕು ಮಕ್ಕಳು ಕೂಡಾ ಇದ್ದಾರೆ.

ಇಂದು ಮುಂಜಾನೆ ಎಂದಿನಂತೆ ಮಲ್ಕಯ್ಯಸ್ವಾಮಿ ಕೆಲಸಕ್ಕೆ ಹೋಗಿದ್ದಾರೆ. ವಿಜಯಲಕ್ಷ್ಮಿ ಮಕ್ಕಳ ಜೊತೆ ಮನೆಯಲ್ಲಿದ್ದಳು. ಈ ಸಮಯದಲ್ಲಿ ವಿಜಯಲಕ್ಷ್ಮಿ ಮನೆಗೆ ಮಲ್ಕಯ್ಯಸ್ವಾಮಿಯ ಸಹೋದರನಾಗಿದ್ದ ದಿವಗಂತ ಕುಪಯ್ಯಸ್ವಾಮಿಯ ಮಕ್ಕಳಾಗಿರುವ ರೇವಣಸಿದ್ದಯ್ಯ, ಮಡೆಪ್ಪಾ, ಸಿದ್ರಾಮಯ್ಯ ಬಂದಿದ್ದಾರೆ. ಬಂದವರೇ ಆಸ್ತಿ ಕೇಳುತ್ತೀರಾ, ನಮಗೆ ಪದೇ ಪದೇ ತೊಂದರೆ ಕೊಡುತ್ತೀರಾ ಎಂದು ಕೇಳಿ, ವಿಜಯಲಕ್ಷ್ಮಿಗೆ ಚಾಕು ಮತ್ತು ತಲವಾರ್ ​ನಿಂದ ಹಲ್ಲೆ ಮಾಡಿದ್ದಾರೆ.

ತಡೆಯಲು ಮುಂದಾದ ಮಕ್ಕಳ ಮೇಲೆ ಕೂಡಾ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು ?

ವಿಜಯಲಕ್ಷ್ಮಿ ಪತಿ ಮಲ್ಕಯ್ಯಸ್ವಾಮಿಗೆ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ಒಂಬತ್ತು ಎಕರೆ ಪಿತ್ರಾರ್ಜಿತ ಆಸ್ತಿಯಿದೆ. ಈ ಆಸ್ತಿಯನ್ನು ಮಲ್ಕಯ್ಯಸ್ವಾಮಿ ಸಹೋದರ ಮಕ್ಕಳೇ ಅನುಭವಿಸುತ್ತಿದ್ದಾರೆ. ಆದರೆ ತನ್ನ ಪತಿಗೆ ಸೇರಬೇಕಿದ್ದ ಜಮೀನನ್ನು ವಿಜಯಲಕ್ಷ್ಮಿ ಅನೇಕ ಬಾರಿ ಕೇಳಿದ್ದಾರೆ. ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದರಂತೆ ನ್ಯಾಯಾಲಯ ಕೂಡಾ ಜಮೀನಿನಲ್ಲಿ ವಿಜಯಲಕ್ಷ್ಮಿ ಪತಿಗೆ ಹಕ್ಕಿದೆ ಎಂಬದು ಆದೇಶಿಸಿದೆ. ಆದರೂ ವಿಜಯಲಕ್ಷ್ಮಿ ಪತಿ ಮಲ್ಕಯ್ಯಸ್ವಾಮಿಯ ಸಹೋದರನ ಮಕ್ಕಳು ಆಸ್ತಿ ಬಿಟ್ಟು ಕೊಟ್ಟಿರಲಿಲ್ಲ.

ಇನ್ನು ತಾವು ಅನುಭವಿಸುತ್ತಿರುವ ಆಸ್ತಿಗೆ ವಿಜಯಲಕ್ಷ್ಮಿಯೇ ಬಹಳ ಹೋರಾಟ ನಡೆಸುತ್ತಿದ್ದಾಳೆ. ಆಕೆಯನ್ನೇ ಮುಗಿಸಿದರೆ ತಮ್ಮ ತಂಟೆಗೆ ಯಾರು ಬರುವುದಿಲ್ಲಾ ಅಂತ ತಿಳಿದು ದುಷ್ಕರ್ಮಿಗಳು ವಿಜಯಲಕ್ಷ್ಮಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.