ಕಲಬುರಗಿ : ದವಡೆ ಹಲ್ಲಿನ ಸಮಸ್ಯೆ ಅಂತಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದ ಮಹಿಳೆ ಕೋಮಾಗೆ ಜಾರಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ವೈದ್ಯರು ನೀಡಿದ ಅನಸ್ತೇಶಿಯಾ ಇಂಜೆಕ್ಷನ್ನಿಂದ ಕೋಮಾಗೆ ಹೋಗಿದ್ದು, ಒಂದೂವರೆ ತಿಂಗಳಿನಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ನಾಜಿಯಾ ಎರಡು ಮಕ್ಕಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಈ ನಡುವೆ ಜನವರಿ 1ರಂದು ಹಲ್ಲು ನೋವು ಅಂತ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬಂದವರು ಕೋಮಾಗೆ ಹೋಗಿದ್ದಾರೆ. ಜನವರಿ 2ರಂದು ದವಡೆ ಹಲ್ಲು ತೆಗೆಯಲು ವೈದ್ಯರು ಅನೆಸ್ತೇಶಿಯಾ ಇಂಜೆಕ್ಷನ್ ನೀಡಿದ್ದಾರೆ. ಅದಾದ ಕೆಲವೇ ನಿಮಿಷಗಳ ಬಳಿಕ ಈಕೆಯ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಹೋಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ನಾಜೀಯಾ ಬೇಗಂ ಆಸ್ಪತ್ರೆ ಬೆಡ್ ಮೇಲೆ ಕೋಮಾ ಸ್ಥಿತಿಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಯಾವಾಗ ನಾಜೀಯಾ ಬೇಗಂ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಹೋದರೋ ಆಗ ಆಡಳಿತ ಮಂಡಳಿ ಎಚ್ಚೆತ್ತುಕೊಂಡು, ಆಕೆಯ ಕುಟುಂಬ ಸದಸ್ಯರಿಂದ ಒಂದು ರೂಪಾಯಿಯನ್ನು ಸಹ ಪಡೆಯದೇ ಸುಮಾರು 45 ದಿನಗಳಿಂದ 8 ಲಕ್ಷಕ್ಕೂ ಅಧಿಕ ಹಣವನ್ನು ಸಂಸ್ಥೆಯವರೇ ಭರಿಸಿ ಆಕೆಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಈಕೆಯ ಆರೋಗ್ಯದಲ್ಲಿ ಮಾತ್ರ ಯಾವುದೇ ಹೇಳಿಕೊಳ್ಳುವ ಬದಲಾವಣೆಯಾಗಿಲ್ಲ.
ಹೀಗಾಗಿ ಇದೀಗ ಆಸ್ಪತ್ರೆಯ ವೈದ್ಯರು ನಾಜೀಯಾಗೆ ಫಿಜಿಯೋಥೆರಫಿ ಚಿಕಿತ್ಸೆ ಬೇಕು ಅದು ನಮ್ಮ ಬಳಿ ಇಲ್ಲ ಹೀಗಾಗಿ ಬೆಂಗಳೂರು ಅಥವಾ ಹೈದ್ರಾಬಾದ್ನ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದಾರೆ. ವೈದ್ಯರ ಯಡವಟ್ಟು ಮಹಿಳೆಯ ಈ ಸ್ಥಿತಿಗೆ ಕಾರಣ ಅಂತಾ ಪೊಷಕರು ಆರೋಪಿಸಿದರೆ, ಇದರಲ್ಲಿ ವೈದ್ಯರ ತಪ್ಪಿಲ್ಲ ಅಂತಾ ಖಾಸಗಿ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಈ ಇಬ್ಬರ ಮಧ್ಯ ನಾಜಿಯಾ ಇದೀಗ ಸಾವು ಬದುಕಿನ ಮಧ್ಯೆ ತನ್ನ ಪುಟಾಣಿ ಮಕ್ಕಳ ಭವಿಷ್ಯಕ್ಕಾಗಿ ಜೀವದ ಜೊತೆ ಹೋರಾಟ ನಡೆಸುತ್ತಿದ್ದಾರೆ.















