ಗದಗ, ಡಿಸೆಂಬರ್ 24: ಪಿನ್ ಸೆಟ್ ಮಾಡಿಕೊಡುತ್ತೇನೆ ಅಂತ ಹೇಳಿ ಎಟಿಎಂ ಕಾರ್ಡ್ ಬದಲಾಯಿಸಿ, ಹಣ ದೋಚುತ್ತಿದ್ದ ಕಳನನ್ನು ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಸತೀಶ ಬಿರಾದಾರ ಬಂಧಿತ ಆರೋಪಿ.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕವೇನೂರು ಗ್ರಾಮದ ನಿವಾಸಿಯಾಗಿರುವ ಸತೀಶ್ ಬಿರಾದಾರ ಓದಿದ್ದು ಕೇವಲ 3ನೇ ತರಗತಿ.
ಬೆಟಗೆರಿ ನಗರದ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಇರುವ ಕೆನರಾ ಬ್ಯಾಂಕ್ ಎಂಟಿಎಂ ಬಳಿ ಸತೀಶ್ ಬಿರಾದಾರ ನಿಂತಿದ್ದನು. ಇದೇ ವೇಳೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಹುಲಿಗೆವ್ವ ಕುರಿ ಎಂಬುವರು ಎಟಿಎಂಗೆ ಬಂದಿದ್ದಾರೆ. ಹೊಸ್ ಎಟಿಎಂ ಕಾರ್ಡ್ಗೆ ಪಿನ್ ಸೆಟ್ ಮಾಡಲು ಪರದಾಡುತ್ತಿದ್ದರು. ಹುಲಿಗೆವ್ವ ಅವರ ಪರದಾಟ ಕಂಡು ಎಂಟಿಎಂ ಒಳಗೆ ಹೋದ ಸತೀಶ್ ಪಿನ್ ಸೆಟ್ ಮಾಡಿಕೊಡುವುದಾಗಿ ಹೇಳಿದ್ದಾನೆ.
ಬಳಿಕ, ನಿಮ್ಮ ಎಟಿಎಂಗೆ ಪಿನ್ ಸೆಟ್ ಆಗಿದೆ ಎಂದು ಹೇಳಿದ್ದಾನೆ. ನಂತರ ಹುಲಿಗೆವ್ವ ಅವರಿಗೆ ಬೇರೆ ಎಟಿಎಂ ಕಾರ್ಡ್ ಕೊಟ್ಟು ಕಳಿಸಿದ್ದಾನೆ. ನಂತರ, ಹುಲಿಗೆವ್ವ ಅವರ ಎಂಟಿಎಂ ಕಾರ್ಡ್ ನಿಂದ ಹಂತ ಹಂತವಾಗಿ 62 ಸಾವಿರ ಹಣ ಡ್ರಾ ಮಾಡಿದ್ದಾನೆ. ಹಣ ಕಳೆದುಕೊಂಡು ಹುಲಿಗೆವ್ವ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.














