ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೆಕ್ಯೂರಿಟಿ ಕಾರಣದಿಂದ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲು ಈಗಾಗಲೇ ನ್ಯಾಯಾಲಯಕ್ಕೆ ಜೈಲಧಿಕಾರಿಗಳು ಮನವಿ ಮಾಡಿಕೊಂಡಿದ್ದರು.
ಇಂದು (ಶನಿವಾರ) ವಿಚಾರಣೆ ನಡೆದಿದ್ದು, ಆಕ್ಷೇಪಣೆ ಅರ್ಜಿ ಸಲ್ಲಿಸೋದಕ್ಕೂ, ಆರೋಪಿ ಪರ ವಕೀಲರಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೀಗ ನಡೆದ ವಿಚಾರಣೆಯಲ್ಲಿ ಬೇರೆ ಜೈಲಿಗೆ ದರ್ಶನ್ ವರ್ಗಾವಣೆ ವಿಚಾರವನ್ನು ನ್ಯಾಯಾಲಯವು ಮುಂದೂಡಿಕೆ ಮಾಡಿದೆ. ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದು, ಇದೇ ಆಗಸ್ಟ್ 30ಕ್ಕೆ ವರ್ಗಾವಣೆ ಕುರಿತ ವಿಚಾರಣೆ ನಡೆಯಲಿದೆ.
ಕೊಲೆ ಆರೋಪಿಗಳಾದ ದರ್ಶನ್, ಪವಿತ್ರಾ ಹಾಗೂ ಒಟ್ಟೂ ಏಳು ಆರೋಪಿಗಳನ್ನು 57ನೇ ಸೆಷನ್ಸ್ ಕೋರ್ಟ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ಹಾಜರಾಗಿದ್ದರು. ಕೋರ್ಟ್ ಹಾಲ್ ನಂ 64ರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು.
ಪ್ರದೂಷ್ ಪರ ವಕೀಲರಿಂದ ಮಾತ್ರ ವರ್ಗಾವಣೆಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿದೆ. ಇನ್ನುಳಿದ ಆರೋಪಿಗಳ ಪರವಾಗಿ ಆಗಸ್ಟ್ 30ರ ವರೆಗೆ ವಕೀಲರು ಸಮಯಾವಕಾಶ ಕೇಳಿಕೊಂಡಿದ್ದರು. ಹೀಗಾಗಿ ಅಲ್ಲಿಯವರೆಗೂ ಆರೋಪಿಗಳು ಪರಪ್ಪನ ಅಗ್ರಹಾರದಲ್ಲೇ ಇರ್ತಾರೆ. ಜೊತೆಗೆ ಆರೋಪಿಗಳ ನ್ಯಾಯಾಂಗ ಬಂಧನವೂ ಸಪ್ಟೆಂಬರ್ 9ರ ತನಕವೂ ವಿಸ್ತರಣೆಯಾಗಿದೆ.
ಪವಿತ್ರಾ ಗೌಡ ಪರ ವಕೀಲರಿಂದ ಸ್ಯಾಟುಚರಿ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಚಾರ್ಜ್ಶೀಟ್ ಸಿಆರ್ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಬಿಎನ್ಎಸ್ಎಸ್ ಅಡಿಯಲ್ಲಿ ಮಾಡಬೇಕಿತ್ತು. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಪವಿತ್ರಾ ಪರ ವಕೀಲ ಬಾಲನ್ ಮನವಿ ಮಾಡಿದ್ದಾರೆ.
ಈ ವಿಚಾರಣೆಯನ್ನೂ ಆಗಸ್ಟ್ 30ಕ್ಕೆ ನ್ಯಾಯಾಲಯ ಮುಂದೂಡಿಕೆ ಮಾಡಿದೆ. ಸೆಪ್ಟೆಂಬರ್ 9 ರಂದು ಎಲ್ಲಾ ಆರೋಪಿಗಳನ್ನು ಮತ್ತೆ ಹಾಜರು ಪಡಿಸಲು ಕೋರ್ಟ್ ತಿಳಿಸಿದೆ. ಆಗಸ್ಟ್ 30ರವರೆಗೂ ದರ್ಶನ್ ಹಾಗೂ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಲ್ಲೇ ಇರಲಿದ್ದಾರೆ ಎಂದು ನ್ಯಾಯಾಲಯ ಸೂಚಿಸಿದೆ.















