ಯಶ್ ನಟನೆಯ ʻರಾಮಾಯಣʼ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ಕುತೂಹಲ ಹೆಚ್ಚಾಗಿದ್ದು, ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದ್ದರೇ ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ʻರಾಮಾಯಣʼ ಮೊದಲ ಭಾಗ ತೆರೆಕಾಣೋಕೆ ಸಜ್ಜಾಗಿದೆ.
ಮೊದಲ ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದ್ದು, ಈ ನಡುವೆ ನಟ ರಣ್ಬೀರ್ ಕಪೂರ್ ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿರುವ ರಣ್ಬೀರ್ ಕಪೂರ್ ಇದೇ ಪಾತ್ರಕ್ಕಾಗಿ ಆಹಾರ ಪದ್ಧತಿಯನ್ನ ಸಂಪೂರ್ಣವಾಗಿ ಬದಲಿಸಿಕೊಂಡಿದ್ದರಂತೆ. ಮಾಂಸಾಹಾರ, ಮದ್ಯಸೇವನೆ ತ್ಯಜಿಸಿ ಸಾತ್ವಿಕ ಆಹಾರ ಪದ್ಧತಿಯ ಮೊರೆ ಹೋಗಿದ್ದಾರೆ.
ಮರ್ಯಾದಾ ಪುರುಷೋತ್ತಮ ರಾಮ ಸಕಲ ಆಸೆಗಳನ್ನ ತ್ಯಜಿಸಿದ್ದ ರಘುಕುಲ ತಿಲಕ. ಇಂಥಹ ದೈವಾಂಶಸಂಭೂತ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಆಧ್ಯಾತ್ಮಿಕ ಶಿಸ್ತನ್ನ ರೂಢಿಸಿಕೊಂಡಿದ್ದರಂತೆ ರಣ್ಬೀರ್ ಕಪೂರ್. ಮದ್ಯ ಹಾಗೂ ಮಾಂಸಾಹಾರ ಸೇವನೆ ತ್ಯಜಿಸಿದ್ದರಂತೆ. ಧ್ಯಾನ ಹಾಗೂ ಯೋಗದ ಮೂಲಕ ದೇಹ ಹುರಿಗೊಳಿಸಿಕೊಂಡು ರಾಮನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರಂತೆ. ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಬಹಳವೇ ಚರ್ಚೆಯಾಗುತ್ತಿದೆ.















