ಮನೆ ರಾಷ್ಟ್ರೀಯ ಕೇಂದ್ರ ಸರ್ಕಾರದಿಂದ ಅಗ್ನಿಪಥ್ ಯೋಜನೆ ಘೋಷಣೆ: ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ

ಕೇಂದ್ರ ಸರ್ಕಾರದಿಂದ ಅಗ್ನಿಪಥ್ ಯೋಜನೆ ಘೋಷಣೆ: ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ

0

ನವದೆಹಲಿ (New Delhi): ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಅಗ್ನಿಪಥ್ ಯೋಜನೆಯನ್ನು ಘೋಷಿಸಿದೆ.  

ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ನೇಮಕಗೊಳ್ಳುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಳು ಆರಂಭದಲ್ಲಿ ನಾಲ್ಕು ವರ್ಷಗಳ ಅವಧಿಗೆ ಸೈನಿಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಅವರಲ್ಲಿ ಕೆಲವರನ್ನು ಉಳಿಸಿಕೊಳ್ಳಲಾಗುವುದು. ಅಗ್ನಿಪಥ್ ಯೋಜನೆಯಡಿ, ಭಾರತೀಯ ಯುವಕರಿಗೆ ‘ಅಗ್ನಿವೀರ್’ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಲಾಗುವುದು.

ದೇಶದಲ್ಲಿ ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗದಿಂದಾಗಿ, ಮಿಲಿಟರಿ ನೇಮಕಾತಿ ಕಡಿಮೆಯಾಗಿದ್ದು, ನಮ್ಮ ದೇಶದಲ್ಲಿ ಸೇನಾ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ದೇಶದ ಮೂರು ಸೇನೆಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಸೀಟುಗಳು ಖಾಲಿ ಇವೆ. ಕಳೆದ ಎರಡು ವರ್ಷಗಳಿಂದ ಅದರ ಬಗ್ಗೆ ವ್ಯಾಪಕವಾದ ಚರ್ಚೆಯ ನಂತರ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಯೋಜನೆಯಡಿ ನೇಮಕಗೊಳ್ಳುವ ಸೈನಿಕರನ್ನು “ಅಗ್ನಿವೀರ್” ಎಂದು ಕರೆಯಲಾಗುತ್ತದೆ. ಪ್ರಸ್ತುತ, ಸೈನ್ಯವು 10 ವರ್ಷಗಳ ಆರಂಭಿಕ ಅವಧಿಗೆ ಕಿರು ಸೇವಾ ಆಯೋಗದ ಅಡಿಯಲ್ಲಿ ಯುವಜನರನ್ನು ನೇಮಿಸಿಕೊಳ್ಳುತ್ತದೆ. ಇದನ್ನು 14 ವರ್ಷಗಳವರೆಗೆ ವಿಸ್ತರಿಸಬಹುದು.

ಈ ಕುರಿತಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಾಹಿತಿ ನೀಡಿದ್ದು, ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಾಗಿ ಆರಂಭಗೊಳ್ಳುತ್ತಿರುವ ಅಗ್ನಿಪಥ್ ಯೋಜನೆಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದ್ದು, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ಸಶಸ್ತ್ರ ಪಡೆಗಳಲ್ಲಿ ಯೋಧರ ಸರಾಸರಿ ವಯಸ್ಸು 26 ವರ್ಷಗಳಾಗಿರಲಿವೆ. ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದರು.

ಅಗ್ನಿಪಥ್ ನೇಮಕಾತಿ ಯೋಜನೆಯು ಪರಿವರ್ತಕ ಉಪಕ್ರಮವಾಗಿದ್ದು ಅದು ಸಶಸ್ತ್ರ ಪಡೆಗಳಿಗೆ ಯುವ ಪ್ರೊಫೈಲ್ ಅನ್ನು ಒದಗಿಸುತ್ತದೆ.  ಅಂತೆಯೇ ಈ ಯೋಜನೆಯೊಂದಿಗೆ ಯೋಧರು ಕೆಲಸವನ್ನು ತೊರೆಯುವಾಗ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯಲಿದ್ದು, ನಾಲ್ಕು ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ವ್ಯಕ್ತಿಯು ಜೀವನದಲ್ಲಿ ಒಮ್ಮೆಯಾದರೂ ಸೇನೆಯ ಸಮವಸ್ತ್ರ ಧರಿಸಬೇಕೆಂಬ ಹಂಬಲ ಹೊಂದಿರುತ್ತಾರೆ. ಹಾಗೆಯೇ ಈ ಸೈನಿಕರು ಹೊಸ ಹೊಸ ಟೆಕ್ನಾಲಜಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೆಲ್ತ್​ ಹಾಗೂ ಫಿಟ್​ನೆಸ್ ಕಡೆಗೆ ಹೆಚ್ಚು ಒತ್ತು ನೀಡಲಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಭಾರತೀಯ ಅರ್ಥವ್ಯವಸ್ಥೆಯೂ ಸುಧಾರಿಸಲಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ ಎಂದೂ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಲ್ಲಿ ಮಾಡಲಾಗುತ್ತಿದ್ದು, ಈ ಯೋಜನೆಯಲ್ಲಿ, ದೇಶದ ಎಲ್ಲಾ ಮೂರು ಸೇನೆಗಳಾದ ನೌಕಾಪಡೆ, ಭೂಸೇನೆ, ವಾಯುಸೇನೆಗಳ ಸೈನಿಕರು ಕೇವಲ ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ನಿವೃತ್ತಿ ಮತ್ತು ಪಿಂಚಣಿ ರೂಪದಲ್ಲಿ ಸರ್ಕಾರಕ್ಕೆ ಯಾವುದೇ ಹೊರೆ ಇರುವುದಿಲ್ಲ. ಸೇನೆಗೆ ಸೇರಲು ಬಯಸುವ ಎಲ್ಲಾ ಯುವಕರಿಗೂ ಅವಕಾಶ ನೀಡಲಾಗುವುದು. ಈಗ ಸರ್ಕಾರವು ಕೇವಲ 3 ವರ್ಷಕ್ಕೆ ಸೈನಿಕರನ್ನು ಆಯ್ಕೆ ಮಾಡುತ್ತದೆ ಮತ್ತು ಈ ಸಮಯದಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಅನೇಕ ತೊಂದರೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಈ ಕುರಿತು ಮಾತನಾಡಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಮಾತನಾಡಿ, ಈ ಯೋಜನೆಯು ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ವ್ಯಾಪಕವಾದ ಪ್ರತಿಭಾ ಪ್ರವಾಹವನ್ನೇ ಹರಿಸುತ್ತದೆ. “ಅಗ್ನಿಪಥ್” ಯೋಜನೆಯನ್ನು ಮೊದಲು “ಟೂರ್ ಆಫ್ ಡ್ಯೂಟಿ” ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಮೂರು ಸೇವೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು ಎಂದು ಹೇಳಿದರು.

ಹಿಂದಿನ ಲೇಖನಯೋಗ ಕಾರ್ಯಕ್ರಮಕ್ಕೆ 12 ಸಾವಿರ ಜನರ ನೋಂದಣಿ: ಸಚಿವ ಎಸ್.ಟಿ.ಸೋಮಶೇಖರ್
ಮುಂದಿನ ಲೇಖನನೂತನ ಲೋಕಾಯುಕ್ತರಾಗಿ ಬಿ.ಎಸ್.ಪಾಟೀಲ್