ಮನೆ ರಾಜ್ಯ ಮೈಸೂರು-ಮುಂಬಯಿ ನಡುವೆ ವಿಮಾನ ಸೇವೆ; ಪ್ರವಾಸೋದ್ಯಮ, ವಾಣಿಜ್ಯ, ಕೈಗಾರಿಕೆಗೆ ಬಲ

ಮೈಸೂರು-ಮುಂಬಯಿ ನಡುವೆ ವಿಮಾನ ಸೇವೆ; ಪ್ರವಾಸೋದ್ಯಮ, ವಾಣಿಜ್ಯ, ಕೈಗಾರಿಕೆಗೆ ಬಲ

0

ಮೈಸೂರು ಮತ್ತು ಮುಂಬಯಿ ನಡುವೆ ನೇರ ವಿಮಾನ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಇಂಡಿಗೊ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಈ ಸೇವೆ ಆರಂಭವಾದರೆ ಮೈಸೂರಿನ ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.

ತಿರುಪತಿ ಮತ್ತು ಗೋವಾಗೂ ವಿಮಾನ ಸೇವೆ ಒದಗಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ಪ್ರಯಾಣಿಕರ ಅನುಕೂಲ ಹೆಚ್ಚಲಿದೆ. ಮೈಸೂರು ‘ಸಾಂಸ್ಕೃತಿಕ ನಗರಿ’ ಮೈಸೂರು ಹಾಗೂ’ವಾಣಿಜ್ಯ ನಗರಿ’ ಮುಂಬಯಿನಡುವೆ ನೇರ ವಿಮಾನ ಸೇವೆ ಒದಗಿಸಬೇಕೆಂಬ ಎರಡೂ ಭಾಗದ ಜನತೆಯ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಪ್ರಸ್ತುತ ಮೈಸೂರು ಹಾಗೂ ಮುಂಬಯಿ ನಡುವೆ ಯಾವುದೇ ವಿಮಾನ ಸೇವೆ ಇಲ್ಲ. ಸದ್ಯ ಮೈಸೂರಿನಿಂದ ಹೈದರಾಬಾದ್‌ ಮತ್ತು ಚೆನ್ನೈ ಹೊರತುಪಡಿಸಿ ಉಳಿದ ಎಲ್ಲಾ ಮಾರ್ಗಗಳಲ್ಲಿ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. ಇದರಿಂದ ಪ್ರವಾಸಿಗರು ಮತ್ತು ಉದ್ಯಮಿ, ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಉಡಾನ್‌ ಯೋಜನೆಯಿಂದ ಮೈಸೂರಿನಿಂದ ಸಾಕಷ್ಟು ವಿಮಾನಗಳು ವಿವಿಧೆಡೆ ಹಾರಾಟ ನಡೆಸುತ್ತಿದ್ದವು. ಆದರೆ, ಯೋಜನೆ ಕೊನೆಗೊಂಡ ಬಳಿಕ ಮೈಸೂರಿನಲ್ಲಿ ಕೇವಲ ಎರಡು ವಿಮಾನ ಸೇವೆ ದೊರೆಯುತ್ತಿದೆ. ಬೇಡಿಕೆ ಇದ್ದರೂ ಹಲವು ಮಾರ್ಗಗಳಿಗೆ ವಿಮಾನ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಮೈಸೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ಶೀಘ್ರವೇ ವಿಮಾನ ಸೇವೆ ಆರಂಭಗೊಳ್ಳಲಿದ್ದು, ಈ ಬಗ್ಗೆ ಇಂಡಿಗೊದೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಸ್ಲಾಟ್‌ಗಳನ್ನು ಗುರುತಿಸಿದ್ದಾರೆ. ಇಲ್ಲಿನ ಬೇಡಿಕೆ ಬಗ್ಗೆಯೂ ಅವರಿಗೆ ಅರಿವಿದೆ. ಮೈಸೂರು ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದ ಪಾಲುದಾರರು ದೀರ್ಘಕಾಲದಿಂದ ಈ ಸೇವೆಗೆ ಬೇಡಿಕೆ ಇಟ್ಟಿದ್ದರು.

ಮೈಸೂರು-ಮುಂಬಯಿ ನಡುವೆ ವಿಮಾನ ಹಾರಾಟ ಶುರುವಾದರೆ ವಾಣಿಜ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಬಲ ಸಿಗಲಿದೆ. ಅಲ್ಲದೆ, ಮೈಸೂರಿನಲ್ಲಿಕೈಗಾರಿಕೆ ಮತ್ತು ಐಟಿ/ಬಿಟಿ ಬೆಳವಣಿಗೆಗೂ ವೇಗ ದೊರಕಲಿದೆ, ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದರು.

ಪ್ರಸ್ತುತ ಭಕ್ತರು ರೈಲು ಅಥವಾ ಬಸ್‌ನಲ್ಲಿ ತಿರುಪತಿಗೆ ಹೋಗಲು ಎರಡು ದಿನಗಳ ಪ್ರಯಾಣ ಮಾಡಬೇಕಿದೆ. ವಿಮಾನ ಸಂಪರ್ಕದಿಂದ ಒಂದೇ ದಿನದಲ್ಲಿ ತಿರುಪತಿಗೆ ತೆರಳಿ ದರ್ಶನ ಪಡೆದು ಮರಳಬಹುದು. ಈ ಪ್ರಯತ್ನವೂ ನಡೆಯುತ್ತಿದೆ. ಅಲ್ಲದೆ, ಗೋವಾಗೆ ವಿಮಾನ ಹಾರಾಟ ನಡೆಸಲು ಕೂಡ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.