ಜೆಮ್ಶೆಡ್ ಪುರ (ಜಾರ್ಖಂಡ್): ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಜೆಮ್ಶೆಡ್ ಪುರದ ಶಾಸ್ತ್ರಿನಗರದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ಘರ್ಷಣೆ ನಡೆದಿದೆ.
ಘರ್ಷಣೆ ವೇಳೆ ಎರಡು ಅಂಗಡಿಗಳು ಮತ್ತು ಆಟೊ ರಿಕ್ಷಾಗೆ ಬೆಂಕಿ ಹಚ್ಚಲಾಗಿದೆ. ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕದ್ಮಾ ಪೊಲೀಸ್ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸಮಾಜ ವಿರೋಧಿ ಶಕ್ತಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿವೆ. ಅವರ ಸಂಚು ವಿಫಲಗೊಳಿಸಲು ನಾಗರಿಕರು ಸಹಕರಿಸಬೇಕು ಎಂದು ಪೂರ್ವ ಸಿಂಗ್ ಭೂಮ್ ಜಿಲ್ಲೆಯ ಉಪ ಆಯುಕ್ತ ವಿಜಯ ಜಾಧವ್ ಮನವಿ ಮಾಡಿದ್ದಾರೆ.
ರಾಮನವಮಿ ಹಿನ್ನೆಲೆಯಲ್ಲಿ ಹಾರಿಸಿದ್ದ ಧ್ವಜಕ್ಕೆ ಕಿಡಿಗೇಡಿಗಳು ಮಾಂಸದ ತುಂಡನ್ನು ಕಟ್ಟಿದ್ದರು. ಇದನ್ನು ಸ್ಥಳೀಯ ಸಂಘಟನೆಯವರು ಶನಿವಾರ ರಾತ್ರಿ ಗಮನಿಸಿದ್ದರು. ಇದರ ಬೆನ್ನಲ್ಲೇ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದವು.
ಇದೇ ವಿಚಾರವಾಗಿ, ಭಾನುವಾರ ಸಂಜೆ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಬಳಿಕ ಎರಡು ಗುಂಪುಗಳ ನಡುವೆ ಕಲ್ಲು, ಇಟ್ಟಿಗೆ ತೂರಾಟ ನಡೆದಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.