ಹೈದರಾಬಾದ್ : ತೆಲಂಗಾಣದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಯ ಆರೋಪಗಳು ಕೇಳಿಬಂದಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಕಳೆದ ಒಂದು ವಾರದಲ್ಲಿ 500 ನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.
ಕಾಮರೆಡ್ಡಿ ಜಿಲ್ಲೆಯ ಭವಾನಿಪೇಟ್, ಪಲ್ವಂಚ, ಫರೀದ್ಪೇಟ್, ವಾಡಿ ಮತ್ತು ಬಂಡರಾಮೇಶ್ವರಪಲ್ಲಿ ಸೇರಿದಂತೆ ಹಳ್ಳಿಗಳಲ್ಲಿ ಬೀದಿ ನಾಯಿಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತ ಅದುಲಪುರಂ ಗೌತಮ್ (35) ಜನವರಿ 12 ರಂದು ದಾಖಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ. ಕಳೆದ ಎರಡು ಮೂರು ದಿನಗಳಲ್ಲಿ ಸುಮಾರು 200 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.
ಜನವರಿ 12 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗೌತಮ್ ಅವರಿಗೆ ನಾಯಿಗಳ ಸಾಮೂಹಿಕ ಹತ್ಯೆಯ ಬಗ್ಗೆ ಮಾಹಿತಿ ಸಿಕ್ಕಿತು. ಆಯಾ ಗ್ರಾಮದ ಸರಪಂಚರ ಸೂಚನೆಯ ಮೇರೆಗೆ ಈ ಕೃತ್ಯಗಳನ್ನು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಐವರು ಗ್ರಾಮದ ಸರಪಂಚ್ಗಳು ಮತ್ತು ಕಿಶೋರ್ ಪಾಂಡೆ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಹತ್ಯೆಗಳನ್ನು ಕಾರ್ಯಗತಗೊಳಿಸಲು ಈ ವ್ಯಕ್ತಿಯನ್ನು ನೇಮಿಸಲಾಗಿತ್ತು ಎನ್ನಲಾಗಿದೆ.
ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದ್ದು, ಅವು ಸಾವನ್ನಪ್ಪಿವೆ ಎಂದು ದೂರುದಾರರು ಆರೋಪಿಸಿದ್ದಾರೆ. ಅದೇ ದಿನ ಸಂಜೆ 6 ಗಂಟೆ ಸುಮಾರಿಗೆ ತಾನು ಮತ್ತು ಸ್ನೇಹಿತ ಭವಾನಿಪೇಟೆ ಗ್ರಾಮಕ್ಕೆ ಭೇಟಿ ನೀಡಿದ್ದಾಗ ದೇವಸ್ಥಾನದ ಬಳಿ ಹಲವಾರು ನಾಯಿಗಳ ಶವಗಳನ್ನು ಎಸೆಯಲಾಗಿತ್ತು ಎಂದರು. ಈ ಕೃತ್ಯಗಳನ್ನು ಉದ್ದೇಶಪೂರ್ವಕ ಮತ್ತು ಕ್ರೂರ ಎಂದು ದೂರುದಾರ ಕರೆದಿದ್ದಾರೆ. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಕೋರಿದ್ದಾರೆ.















