ಚಿಕ್ಕಮಗಳೂರು : ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂಗಳ ಮನೆಯ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ 2 ಕೋಮಿನ ನಡುವೆ ಗಲಾಟೆ ನಡೆದಿದೆ. ಸೋಮವಾರ (ಫೆ.16) ಮಧ್ಯರಾತ್ರಿ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ವಾರದಿಂದ 5-6 ಯುವಕರ ಗುಂಪು ಮನೆಯ ಹಿಂದೆ ಬಂದು ಕಲ್ಲು ಎಸೆದು ಪರಾರಿಯಾಗುತ್ತಿತ್ತು. ಕಳೆದ ಮೂರು ದಿನಗಳಿಂದ ಹೆಣ್ಣುಮಕ್ಕಳ ಹಿಂದೆ ಹೋಗೋದು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಹಿಂದೂ ಸಂಘಟನೆ ಕಾರ್ಯಕರ್ತರು ಸಿಕ್ಕಿಬಿದ್ದ ಇಬ್ಬರು ಯುವಕರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಬಸವನಹಳ್ಳಿ ಪೊಲೀಸ್ ಠಾಣೆ ಮುಂದೆ ಎರಡೂ ಕೋಮಿನ ನೂರಾರು ಯುವಕರು ಜಮಾಯಿಸಿದ್ದರು. ಈ ವೇಳೆ, ಕಲ್ಲು ಹೊಡೆದವರು ಅವರಲ್ಲ. ಹಲ್ಲೆ ಮಾಡಿದವರ ಮೇಲೂ ಕ್ರಮವಾಗಬೇಕೆಂದು ಒಂದು ಕೋಮಿನ ಯುವಕರು ವಾದಿಸಿದ್ದಾರೆ.
ಎಚ್ಚೆತ್ತ ಪೊಲೀಸರು, ತಕ್ಷಣ ಪೊಲೀಸ್ ಠಾಣೆ, ಆಸ್ಪತ್ರೆ ಬಳಿ ಗುಂಪು ಸೇರದಂತೆ ಎರಡೂ ಕೋಮಿನ ಯುವಕರನ್ನು ಕಳಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹಲ್ಲೆಗೊಳಗಾದ ಯುವಕರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲ್ಲು ತೂರಾಟದ ವಿಚಾರವಾಗಿ ಮನೆಯ ಮಾಲೀಕರು ಅಪ್ರಾಪ್ತ ಬಾಲಕರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಅಪ್ರಾಪ್ತ ಬಾಲಕರು, ಹಿಂದೂ ಕಾರ್ಯಕರ್ತರು, ಬಿಜೆಪಿ ಮುಖಂಡರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.















