ಮನೆ ರಾಜಕೀಯ ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿಯಿಂದ ಪಿ.ಎನ್‌.ದಯಾನಿಧಿ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿಯಿಂದ ಪಿ.ಎನ್‌.ದಯಾನಿಧಿ ಉಚ್ಛಾಟನೆ

0

ಚಾಮರಾಜನಗರ(Chamarajanagara):  ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಎನ್‌.ದಯಾನಿಧಿ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌  ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ಆರು ವರ್ಷಗಳ ಅವಧಿಗೆ ಪಿ.ಎನ್‌.ದಯಾನಿಧಿ ಅವರನ್ನು ಉಚ್ಚಾಟಿಸಲಾಗಿದೆ’ ಎಂದು ತಿಳಿಸಿದ್ದಾರೆ.

ದಯಾನಿಧಿ ಅವರು ಚಾಮರಾಜನಗರ ತಾಲ್ಲೂಕಿನಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿಜಯೇಂದ್ರ ಅವರ ಅಭಿಮಾನಿಗಳ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಜಿಲ್ಲಾ ಮುಖಂಡರ ಕೆಲವು ನಿರ್ಧಾರಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ನಡೆದ ಚಾಮುಲ್‌ ಅಧ್ಯಕ್ಷರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಎಚ್‌.ಎಸ್‌.ಬಸವರಾಜು ಅವರ ಬದಲಿಗೆ ನಾಗೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೂ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಅವರ ಸಮ್ಮುಖದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಉಚ್ಛಾಟನೆಗೆ ಕಾರಣ ತಿಳಿದಿಲ್ಲ:

ದಯಾನಿಧಿ ಅವರು ಪ್ರತಿಕ್ರಿಯಿಸಿ, ‘ನನಗೆ ವಿಚಾರ ಗೊತ್ತಿರಲಿಲ್ಲ. ಮಾಧ್ಯಮದವರು ಹೇಳಿದಾಗಲಷ್ಟೇ ಗೊತ್ತಾಗಿದೆ. ಯಾವ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಕಾರಣ ಕೇಳಿ ನೋಟಿಸ್‌ ಕೂಡ ನೀಡಿಲ್ಲ. ಅಚ್ಚರಿಯ ಜೊತೆಗೆ ದಿಗ್ಭ್ರಮೆಯಾಗಿದೆ. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದಿದ್ದಾರೆ.

ಮುಖಂಡರ ಕೆಲವು ನಿರ್ಣಯಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಚಾಮುಲ್‌ ಅಧ್ಯಕ್ಷರ ಚುನಾವಣೆಯಲ್ಲೂ ಅಭ್ಯರ್ಥಿ ಬದಲಿಸಿದಾಗ ಆಕ್ಷೇಪಿಸಿದ್ದೆ. ಆದರೆ ಅದು ಪಕ್ಷದ ವಿರೋಧಿ ಚಟುವಟಿಕೆ ಹೇಗಾಗುತ್ತದೆ? ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿ ನಂತರ ಪ್ರತಿಕ್ರಿಯಿಸುವೆ  ಎಂದು ತಿಳಿಸಿದರು.

ಹಿಂದಿನ ಲೇಖನಬೈಕ್ ಹಾರ್ನ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ
ಮುಂದಿನ ಲೇಖನಕಾಲಕ್ಕೆ ಯಾವ ಗಡಿ,,,? – ಕವಿತೆ