ಮನೆ ಸುದ್ದಿ ಜಾಲ ಜೂ.25 ರಂದು ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ: ಎಂ.ಜೆ. ರೂಪ

ಜೂ.25 ರಂದು ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ: ಎಂ.ಜೆ. ರೂಪ

0

ಮೈಸೂರು (Mysuru): ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದಂತ 75 ಸ್ಥಳಗಳಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ರೂಪ ಎಂ.ಜೆ ಅವರು ತಿಳಿಸಿದರು.

ಮಹಾನಗರ ಪಾಲಿಕೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕ್ರೀಡಾ ಇಲಾಖೆಯು ರೂಪಿಸಿದಂತಹ ಕೆಲೋ ಇಂಡಿಯಾ ರೀತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮವನ್ನು ಜೂನ್ 25 ರಂದು ನಡೆಸಲು ನಿರ್ಧರಿಸಲಾಗಿದೆ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಅವರು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಹೊಂದಿರುವ ಐತಿಹಾಸಿಕ ಸ್ಥಳಗಳಾದ ರಾಮಸ್ವಾಮಿ ವೃತ್ತ, ಸುಬ್ಬರಾಯನ ಕೆರೆ, ನಂಜನಗೂಡು ತಾಲ್ಲೂಕಿನ ಬದನವಾಳು ಮತ್ತು ತಗಡೂರು ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಪ್ರಮುಖ ಉದ್ದೇಶ ದೇಶದ ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕದ ಕೊಡುಗೆಯನ್ನು ಸ್ಮರಿಸುವುದೇ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಯೋಜನೆಗೆ 4 ಸ್ಥಳಗಳಿಗೆ ಸಂಬಂಧಿಸಿದಂತೆ 4 ಉಪಸಮಿತಿಗಳನ್ನು ರಚಿಸಲಾಗುವುದು. ನಗರದಲ್ಲಿ ರಾಮಸ್ವಾಮಿ ವೃತ್ತ ಹಾಗೂ ಸುಬ್ಬರಾಯನ ಕೆರೆ ಮೈದಾನದಲ್ಲಿ ನಡೆಸಲಾಗುವುದು. ಕಾರ್ಯಕ್ರಮವನ್ನು ಒಟ್ಟು 4 ಹಂತಗಳಲ್ಲಿ ನಡೆಯಲಿದ್ದು ಜೂನ್ 25 ರಂದು ನಡೆವುದು ಮೊದಲ ಹಂತದ ಕಾರ್ಯಕ್ರಮ ಆಗಿದೆ, 2 ನೇ ಹಂತದಲ್ಲಿ ಸುಬ್ಬರಾಯನ ಕೆರೆ ಮೈದಾನದಲ್ಲಿ “ಹೋರಾಟ ನೆಲದಲ್ಲಿ ಒಂದು ದಿನ” 15 ದಿನ ಗಳ ಕಾಲ ಜುಲೈ 1 ರಿಂದ 15 ರ ತನಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

3 ನೇ ಹಂತದಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 8 ರ ತನಕ “ವಿಭಾಗವಾರು ರಥ ಯಾತ್ರೆಗಳು” ನಡೆಯಲಿದೆ. ಮೈಸೂರು, ಬೆಂಗಳೂರು, ಗುಲ್ಬರ್ಗ, ಬೆಳಗಾವಿ ಈ ನಾಲ್ಕು ಕಂದಾಯ ವಿಭಾಗಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಮೈಸೂರು ವಿಭಾಗದಲ್ಲಿ 8 ಜಿಲ್ಲೆಗಳಿದ್ದು, ಒಂದೊಂದು ಜಿಲ್ಲೆಯಿಂದ ರಥ ಯಾತ್ರೆ ಪ್ರಾರಂಭವಾಗಿ ಉಡುಪಿ ಇಂದ ಪ್ರಾರಂಭವಾಗಿ ಚಿಕ್ಕಮಗಳೂರು, ಹಾಸನ, ಮಡಿಕೇರಿ, ಮಂಡ್ಯ ತಲುಪಿ ಆಗಸ್ಟ್ 12 ಕ್ಕೆ ಬೆಂಗಳೂರು ತಲುಪಿ ಮುಖ್ಯ ಕಾರ್ಯಕ್ರಮ ವನ್ನು ನಡೆಸಲಾಗುವುದು ಎಂದು ಹೇಳಿದರು.

ಉಪ ಸಮಿತಿಗಳನ್ನು ರಚಿಸಿ ಪ್ರತ್ಯೇಕ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಲಾಗುವುದು. 4 ಸ್ಥಳಗಳಲ್ಲಿಯೂ ಸ್ವಾತಂತ್ರ ಹೋರಾಟದಲ್ಲಿ ಸ್ಥಳದ ವಿಶೇಷತೆ ಕುರಿತು ಬೆಳಿಗ್ಗೆ 10 ಗಂಟೆಗೆ ಶಿಲಾಫಲಕಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು. ರಾಮಸ್ವಾಮಿ ವೃತ್ತಕ್ಕೆ 4 ರಸ್ತೆಗಳಿಂದ ಮೆರವಣಿಗೆ ಹೊರಟು ಸುಬ್ಬಾರಾಯನ ಕೆರೆ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಕಾರ್ಯಕ್ರಮದ ಸಂಯೋಜನಾ ಅಧಿಕಾರಿಯಾದ ಎಂ. ಬಿ. ಸುರೇಶ್, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳಾದ ಅನಿಲ್ ಕುಮಾರ್, ಮೈಸೂರು ಡೈರಿಯ ಸಹಾಯಕ ವ್ಯವಸ್ಥಾಪಕರಾದ ಶ್ವೇತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ: ದೇವರಾಜ್ ಭೂತೆ
ಮುಂದಿನ ಲೇಖನಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ: ಅಜಿತ್‌ ದೋವಲ್‌ ಜೊತೆ ಅಮಿತ್‌ ಶಾ ತುರ್ತು ಸಭೆ