ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಆನೆ ದಾಳಿ ಮಾಡಿದೆ.
ಎರಡು ದಿನಗಳ ಹಿಂದೆ ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ವಿದ್ಯಾರ್ಥಿನಿ ಕವನಾ ಅವರ ಮೇಲೆ ದಾಳಿ ಮಾಡಿ ಸಾಯಿಸಿದ್ದ ಕಾಡಾನೆ ಸೆರೆಗೆ ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.
ಮಂಗಳವಾರ ಬೆಳಿಗ್ಗೆ ಆನೆ ಸೆರೆ ಹಿಡಿಯುವ ವೇಳೆ ಗನ್ ನಿಂದ ಅರವಳಿಕೆ ಚುಚ್ಚುಮದ್ದು ನೀಡಲು ಹೋದಾಗ ಆ ಶಬ್ದದ ಜಾಡು ಹಿಡಿದು ಬಂದು ಡಾ.ವಿನಯ್ ಅವರ ಮೇಲೆ ದಾಳಿ ಮಾಡಿದೆ.
ಗಾಯಗೊಂಡ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನೆ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ತಂಡ, ಮಾವುತರು, ಪಶು ವೈದ್ಯಾಧಿಕಾರಿಗಳ ತಂಡದೊಡನೆ ಕಾರ್ಯಾಚರಣೆ ಆರಂಭಿಸಿದ್ದರು.
ಸೋಮವಾರ ಬಸವಾಪಟ್ಟಣದ ಶೃಂಗಾರ ಭಾಗ್ ಬಳಿ ಇರುವ ಸಂಶಯ ವ್ಯಕ್ತವಾಗಿತ್ತು. ಆದರೆ ಮಂಗಳವಾರ ನ್ಯಾಮತಿಯ ಕೆಂಚಿಕೊಪ್ಪ ಸಮೀಪದ ಹನುಮಾಪುರ ಗಡಿ ಭಾಗ ಜಾಲಿ ಹೊಸೂರು ಹತ್ತಿರ ಕಾಣಿಸಿಕೊಂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.