ಮನೆ ಅಪರಾಧ ಮುರುಘಾ ಶರಣರ ವಿರುದ್ಧ ಮತ್ತೊಂದು ದೂರು ದಾಖಲು: ಶರಣರು ಸೇರಿದಂತೆ 7 ಮಂದಿ ಆರೋಪಿಗಳು

ಮುರುಘಾ ಶರಣರ ವಿರುದ್ಧ ಮತ್ತೊಂದು ದೂರು ದಾಖಲು: ಶರಣರು ಸೇರಿದಂತೆ 7 ಮಂದಿ ಆರೋಪಿಗಳು

0

ಮೈಸೂರು(Mysuru): ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇಲ್ಲಿನ ನಜರಬಾದ್‌ ಠಾಣೆಯಲ್ಲಿ ಗುರುವಾರ ತಡರಾತ್ರಿ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಕ್ಕಳ ತಾಯಿ ದೂರು ನೀಡಿದ್ದು, ಶರಣರು ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌’ಐಆರ್‌ ದಾಖಲಾಗಿದೆ.

ದೌರ್ಜನ್ಯ ನಡೆಸಲು ಶರಣರು, ವಾರ್ಡನ್‌ ರಶ್ಮಿಯವರ ಮೂಲಕ ತಮ್ಮ ಖಾಸಗಿ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ಎಂಬ ದೂರಿನ ಮೇರೆಗೆ ಶರಣರನ್ನು ಮೊದಲ ಆರೋಪಿಯನ್ನಾಗಿಸಲಾಗಿದ್ದು, -ನಂತರದ ಆರೋಪಿಗಳನ್ನಾಗಿ ವಾರ್ಡನ್‌ ರಶ್ಮಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಪರಮಶಿವಯ್ಯ ಮತ್ತು ಗಂಗಾಧರಯ್ಯ, ಮುರುಘಾ ಮಠದ ಬಸವಲಿಂಗ ಮತ್ತು ಕರಿಬಸಪ್ಪ ಅವರನ್ನು ಹೆಸರಿಸಲಾಗಿದೆ.

ತನ್ನ ಇಬ್ಬರು ಮಕ್ಕಳನ್ನಷ್ಟೇ ಅಲ್ಲದೆ, ಇನ್ನಿಬ್ಬರ ಮಕ್ಕಳ ಮೇಲೂ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯು ದೂರಿದ್ದಾರೆ.

ಹೀಗಾಗಿ 14 ವರ್ಷದ ಇಬ್ಬರು, 15 ವರ್ಷ ಹಾಗೂ 12 ವರ್ಷದ ಒಬ್ಬರು ಸೇರಿ ನಾಲ್ವರು ಬಾಲಕಿಯರನ್ನು ಸಂತ್ರಸ್ತರನ್ನಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಮಹಿಳೆಯು ಮಠದಲ್ಲೇ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅತಿ ಬಡತನದ ಕಾರಣಕ್ಕೆ ತನ್ನ ಮಕ್ಕಳನ್ನೂ ಮಠದ ಶಾಲೆ ಹಾಗೂ ವಸತಿನಿಲಯಕ್ಕೆ ದಾಖಲಿಸಿದ್ದರು.

ಮಧ್ಯಾಹ್ನದ ಊಟದ ವೇಳೆಯಲ್ಲಿ ಹಾಗೂ ವಸತಿ ನಿಲಯದ ಕಡೆಗೆ ತೆರಳಿದಾಗಷ್ಟೇ ತನ್ನ ಮಕ್ಕಳನ್ನು ನೋಡಲು ಅವಕಾಶ ಸಿಗುತ್ತಿತ್ತು ಎಂದು ತಿಳಿಸಿದ್ದಾರೆ.

ಆರು ವರ್ಷದ ಹಿಂದೆ ಮಹಿಳೆಯು ತನ್ನ ಇಬ್ಬರು ಮಕ್ಕಳನ್ನು ಕ್ರಮವಾಗಿ 3ನೇ ಮತ್ತು 1ನೇ ತರಗತಿಗೆ ಸೇರಿಸಿದ್ದರು. ಒಬ್ಬ ಮಗಳನ್ನು 2019ರಲ್ಲಿ ಮತ್ತು ಇನ್ನೊಬ್ಬ ಮಗಳನ್ನು 2020ರ ಕೋವಿಡ್‌ ಅವಧಿಯಲ್ಲಿ ಶರಣರು ಮೊದಲಿಗೆ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು. ಋತುಮತಿಯರಾಗುವವರೆಗೂ ಶರಣರು ದೌರ್ಜನ್ಯ ಎಸಗಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ ಎಂದು ಮಹಿಳೆಯು ಆರೋಪಿಸಿದ್ದಾರೆ.

ವಸತಿ ನಿಲಯದಲ್ಲಿದ್ದ 14 ಮತ್ತು 15 ವರ್ಷ ವಯಸ್ಸಿನ ಇನ್ನಿಬ್ಬರು ಬಾಲಕಿಯರು ಶರಣರಿಂದ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂದೂ ಮಹಿಳೆಯರು ಆರೋಪಿಸಿದ್ದಾರೆ.

ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಹೆದರಿಸುತ್ತಿದ್ದರು. ಸ್ವಾಮೀಜಿಯ ಸಹಾಯಕ ಮಹಾಲಿಂಗ ಮತ್ತು ಅಡುಗೆಭಟ್ಟ ಕರಿಬಸಪ್ಪ ಅವರು ಶರಣರ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿಬಿಡುವುದು, ಕೊಠಡಿಗೆ ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುತ್ತಿದ್ದುದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಮಹಿಳೆಯು ಆರೋಪಿಸಿದ್ದಾರೆ.

ಸ್ವಾಮೀಜಿ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರಿಂದ, ನನ್ನ ಮಕ್ಕಳು ಹದಿಯರೆಯದವರಾಗಿದ್ದು, ಮಠದಲ್ಲೇ ನಾನು ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲಳಾಗಿದ್ದುದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಆದರೆ ಇಬ್ಬರು ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ದೂರು ನೀಡಲು ಮುಂದಾದೆ ಎಂದೂ ಹೇಳಿದ್ದಾರೆ.

ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ‌ನಜರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಎಸ್’ಡಿಎಂ ಕಾಲೇಜಿನಲ್ಲಿ ಉದ್ಯೋಗಾವಕಾಶ
ಮುಂದಿನ ಲೇಖನಪತ್ನಿಗೆ ಮೆಸೇಜ್ ಮಾಡಿದ್ದ ಟೈಲರ್’ನ್ನು ಹತ್ಯೆ ಮಾಡಿ ಪತಿ