ಮನೆ ಅಪರಾಧ ಬೆಳಗಾವಿ ಬಿಮ್ಸ್​ ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ

ಬೆಳಗಾವಿ ಬಿಮ್ಸ್​ ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ

0

ಬೆಳಗಾವಿ: ಹುಕ್ಕೇರಿ ತಾಲೂಕಿನ ಗೌಡವಾಡದ ವೈಶಾಲಿ ಕೊಟಬಾಗಿ ಅವರಿಗೆ 4 ದಿನಗಳ ಹಿಂದಷ್ಟೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಬೆಳಗಾವಿ ಬಿಮ್ಸ್​ಗೆ ಸ್ಥಳಾಂತರ ಮಾಡಿದ್ದರು. ಶನಿವಾರ ಬೆಳಗ್ಗೆ ಬಿಮ್ಸ್​ನಲ್ಲಿ ವೈಶಾಲಿಗೆ ಸಿಜೇರಿಯನ್ ಆಗಿದ್ದು, ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದಾರೆ.

Join Our Whatsapp Group

ಬಳಿಕ ವೈಶಾಲಿ ಆರೋಗ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಭಾನುವಾರ ಬೆಳಗ್ಗೆ ವೈಶಾಲಿಗೆ ಎದೆನೋವು ಕಾಣಿಸಿಕೊಂಡಿದ್ದು, ಐಸಿಯುಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೈಶಾಲಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ವೈಶಾಲಿ ಸಾವಿಗೆ ಕಾರಣ ಎಂದು ಕುಟುಂಬದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೊಚ್ಚಲ ಹೆರಿಗೆ ಖುಷಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೈಶಾಲಿ ಮೃತಪಟ್ಟಿರುವುದರಿಂದ, ರೊಚ್ಚಿಗೆದ್ದ ಕುಟುಂಬದವರು ಮೃತ ಬಾಣಂತಿ ಶವವನ್ನು ಪೋಸ್ಟ್ ​​ಮಾರ್ಟಂಗೆ ಕೊಟ್ಟಿರಲಿಲ್ಲ. ನಂತರ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಂಎಲ್‌ಸಿ ಮಾಡಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಬಾಣಂತಿ ಶವ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದಲ್ಲಿ ವೈಶಾಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಸಾವಿನ ಸತ್ಯ ಬಯಲಾಗಲಿದೆ. ಇತ್ತ ಯಾವುದೋ ಮಾತ್ರೆಗಳನ್ನು ನೀಡಿದ್ದಕ್ಕೆ ಈ ರೀತಿ ಆಗಿದೆ ಅಂತ ಕುಟುಂಬದರು ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.