ಬಂಟ್ವಾಳ(ದಕ್ಷಿಣ ಕನ್ನಡ): ಮದುವೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವನ ಹಸ್ತವನ್ನು ಕತ್ತರಿಸಿ, ಕೊಲೆಗೆ ಯತ್ನಿಸಿರುವ ಘಟನೆ ಬಂಟ್ವಾಳ ಕಸಬಾ ಗ್ರಾಮದ ಮಂಡಾಡಿಯಲ್ಲಿ ನಡೆದಿದೆ.
ಆರೋಪಿ ಎಂದು ಹೇಳಲಾಗಿರುವ ಸಂತೋಷ್, ಆತನ ಸ್ನೇಹಿತ ಶಿವರಾಜ್ ಕುಲಾಲ್ ಎಂಬಾತನ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದಾನೆ.
ಶಿವರಾಜ್ ಕುಲಾಲ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚಿಗೆ ಗುತ್ತಿಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು. ಆದರೆ ಮೇ. 21 ರಂದು ರಾತ್ರಿ ವೇಳೆ ಈತನ ಮೊಬೈಲ್ ಗೆ ಅನಾಮಧೇಯ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿ ಯಾರು ಎಂದು ಕೇಳಿದಾಗ ಆ ಕಡೆಯಿಂದ ಪ್ರತಿಕ್ರಿಯಿಸಿದ ವ್ಯಕ್ತಿ ನಾನು ಸಂತೋಷ್ ಎಂದು ಹೇಳಿದ್ದಾನೆ. ಆತ ಹಲ್ಲೆಗೊಳಗಾಗಿದ್ದ ಶಿವರಾಜ್ ಕುಲಾಲ್ ನ ಪರಿಚಿತನಾಗಿದ್ದು, ನಿನ್ನ ಬಳಿ ಮಾತನಾಡಬೇಕು ಬಿ ಕಸಬಾ ಗ್ರಾಮದ ಅರಬ್ಬಿ ಗುಡ್ಡೆಯ ಗಣೇಶ ಸ್ಟೋರ್ ಅಂಗಡಿ ಬಳಿಗೆ ಬರುವಂತೆ ತಿಳಿಸಿದ್ದಾನೆ.
ಅದರಂತೆ ಶಿವರಾಜ್ ಕುಲಾಲ್ ಅಲ್ಲಿಗೆ ಹೋದಾಗ ಅಲ್ಲಿ ಸಂತೋಷ್, ತನ್ನ ಅಕ್ಕನ ಮದುವೆ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಸಂತೋಷ್, ಶಿವರಾಜ್ ಕುಲಾಲ್ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.