ಮನೆ ಅಪರಾಧ ರೈಸ್ ಪುಲ್ಲಿಂಗ್ ಚೊಂಬು ತೋರಿಸಿ 6.58 ಎಕರೆ ಜಮೀನು ಬರೆಸಿಕೊಂಡಿದ್ದ ಐವರ ಬಂಧನ

ರೈಸ್ ಪುಲ್ಲಿಂಗ್ ಚೊಂಬು ತೋರಿಸಿ 6.58 ಎಕರೆ ಜಮೀನು ಬರೆಸಿಕೊಂಡಿದ್ದ ಐವರ ಬಂಧನ

0

ಬೆಂಗಳೂರು: ರೈಸ್ ಪುಲ್ಲಿಂಗ್ ಚೊಂಬು ತೋರಿಸಿ ಉದ್ಯಮಿಗೆ 6.58 ಎಕರೆ ಬರೆಯಿಸಿಕೊಂಡು ಕೋಟ್ಯಾಂತರ ರೂ. ವಂಚಿಸಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಐವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ವಂಚನೆಗೊಳಗಾದ ಉದ್ಯಮಿ ಕಾಂತರಾಜು ನೀಡಿದ ದೂರಿನ ಮೇರೆಗೆ ನಾಗರತ್ನ, ರಾಮಚಂದ್ರ, ಸುಕುಮಾರ್ ಹಾಗೂ ನಟೇಶ್, ಮಂಜುನಾಥ್ ಎಂಬುವರನ್ನ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಗಂಗಾ ಬೋರ್​ವೇಲ್ ಕಂಪನಿ ಸ್ಥಾಪಿಸಿದ್ದ ಕಾಂತರಾಜು, ಅಂಡರ್ ವಾಟರ್ ಹಾಗೂ ಕ್ರೂಡಾಯಿಲ್ ಪತ್ತೆ ಹಚ್ಚಿರುವುದರಲ್ಲಿ ಪರಿಣಿತರಾಗಿದ್ದರು. ರಾಜ್ಯಪಾಲರಿಂದ ವಿಶಲ್ ಮ್ಯಾನ್ ಎಂದು ಕರೆಯಿಸಿಕೊಂಡಿದ್ದರು. ಈವರೆಗೂ ಸುಮಾರು 7 ಸಾವಿರಕ್ಕೂ ಹೆಚ್ಚು ಅಂಡರ್ ವಾಟರ್ ಪಾಯಿಂಟ್​ ಗಳನ್ನ ಕಾಂತರಾಜು ಪತ್ತೆ ಹಚ್ಚಿದ್ದರು. ಸ್ವಂತದೊಂದು ಕ್ರೂಡ್ ಆಯಿಲ್ ಹಾಗೂ ರಿಪೈನರಿ ಪ್ಲ್ಯಾಂಟ್ ತೆರೆಯಬೇಕೆಂದು ಮುಂದಾಗಿದ್ದರು. ಆದರೆ, ಪ್ಲ್ಯಾಂಟ್ ಸ್ಥಾಪನೆಗೆ ಪರವಾನಗಿ ಸಿಕ್ಕಿರಲಿಲ್ಲ. ಈ ವೇಳೆ, ಆರೋಪಿಗಳ ಪರಿಚಯವಾಗಿದೆ. ತಮ್ಮ ಬಳಿ ಪೆಟ್ರೋಲ್ ಬಂಕ್ ಇದ್ದು ನಿಮಗೆ ಪ್ಲಾಂಟ್ ತೆರೆಯಲು ಅನುಮತಿ ಕೊಡಿಸುತ್ತೇನೆ. ಇದಕ್ಕೆ ಕೋಟ್ಯಾಂತರ ರೂಪಾಯಿ ಹಣ ತಗುಲಿದ್ದು, ಅದನ್ನ ನಾವು ನಿಮಗೆ ಕೊಡುತ್ತೇವೆ, ಆದರೆ ಸದ್ಯ ನಮ್ಮ ಬಳಿ ಹಣವಿಲ್ಲ ಎಂದಿದ್ದರು.

ನಮ್ಮ ಬಳಿ 5 ರೈಸ್ ಪುಲ್ಲಿಂಗ್ ಚೊಂಬುಗಳಿದ್ದು ಅದು ಸ್ಯಾಟಲೈಟ್ನೊಂದಿಗೆ ಸಂಪರ್ಕ ಹೊಂದುತ್ತವೆ. ಆ ರೈಸ್ ಪುಲ್ಲಿಂಗ್ ಚೊಂಬುಗಳು ಆಲ್ಪಾ, ಬೀಟಾಗಾಮಾ ರೇಖೆಗಳೊಂದಿಗೆ ಸಂಪರ್ಕ ಹೊಂದುತ್ತವೆ ಎಂದು ನಂಬಿಸಿದ್ದರು. ಅಷ್ಟೇ ಅಲ್ಲದೇ ಸುಳ್ಳನ್ನ ಸೆಟಪ್ ಮಾಡಿ ಪರೀಕ್ಷೆ ಮಾಡಿ ತೋರಿಸಿ ನಂಬಿಸಿದ್ದರು. ನಗರದ ಪ್ರತಿಷ್ಠಿತ ಹೋಟೆಲ್ ​ಗಳಿಗೆ ಕರೆಸಿ ಬಾಡಿಗಾರ್ಡ್ ​ಗಳನ್ನ ಸೆಟಪ್ ಮಾಡಿ ಬಿಲ್ಡಪ್ ಕೊಟ್ಟು ನಂಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೈಸ್ ಪುಲ್ಲಿಂಗ್ ಚೆಂಬುಗಳನ್ನ ಮಾರಿದರೆ 5 ಲಕ್ಷ ಕೋಟಿ ಬರುತ್ತೆ. ಅದನ್ನ ಮಾರಿದ ದುಡ್ಡಿನಲ್ಲಿ ನಿಮಗೆ ಪ್ಲಾಂಟ್ ಜೊತೆಗೆ ಅನುಮತಿ ಕೊಡಿಸುತ್ತೇವೆ ಎಂದಿದ್ದರು. ಇದನ್ನ ನಂಬಿ ಕಾಂತರಾಜು ನೆಲಮಂಗಲದಲ್ಲಿರುವ 2.4 ಎಕರೆ ಗುಂಟೆ ಜಮೀನು, ಥಣಿಸಂದ್ರದ 30X40 ಸೈಟ್, ಕನಕಪುರದ 4.18 ಎಕರೆ ಜಮೀನು ಬರೆದುಕೊಟ್ಟಿದ್ದರು. ವರ್ಷಾನುಗಟ್ಟಲೆ ಕಳೆದರೂ ಜಮೀನು ವಾಪಸ್ ಕೊಡದೇ ಅನುಮತಿಯೂ ಕೊಡಿಸದೇ ಸತಾಯಿಸಿದ್ದರು. ಈ ಸಂಬಂಧ ವಂಚನೆಗೊಳಗಾದ ಉದ್ಯಮಿ ನೀಡಿದ ದೂರು ಆಧರಿಸಿ ಐವರನ್ನ ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.