ಮನೆ ಸ್ಥಳೀಯ ಮನೆಯಲ್ಲಿ ಆನೆಯ ದವಡೆ ಹಲ್ಲು ಇಟ್ಟುಕೊಂಡಿದ್ದ ವ್ಯಕ್ತಿಯ ಬಂಧನ

ಮನೆಯಲ್ಲಿ ಆನೆಯ ದವಡೆ ಹಲ್ಲು ಇಟ್ಟುಕೊಂಡಿದ್ದ ವ್ಯಕ್ತಿಯ ಬಂಧನ

0

ಮೈಸೂರು: ರಾಜ್ಯದಂತ ಹುಲಿ ಉಗುರು ಸೆಲೆಬ್ರಿಟಿಗಳ ನಿದ್ದೆಗೆಡಿಸುತ್ತಿರುವ ವೇಳೆ ಮೈಸೂರಿನಲ್ಲಿ ಅರಣ್ಯಾಧಿಕಾರಿಗಳ ತಂಡ ಮನೆಯೊಂದರ ಮೇಲೆ ದಾಳಿ ಮಾಡಿ ಆನೆಯ ದವಡೆ ಹಲ್ಲೊಂದನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.     

ಮೈಸೂರಿನ ಉದಯಗಿರಿ ನಿವಾಸಿ ಅಭಿರಾಮ್ ಸುಂದರನ್ (70) ವನ್ಯಜೀವಿ ಸಂರಕ್ಷಣಾ ಕಾನೂನು ಉಲ್ಲಂಘಿಸಿ, ಬಂಧನಕ್ಕೊಳಗಾದ ವ್ಯಕ್ತಿ.

ಹುಲಿ ಉಗುರು ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಮೈಸೂರು ಅರಣ್ಯಾಧಿಕಾರಿಗಳ ತಂಡ ಅಭಿರಾಮ್ ಸುಂದರನ್ ಅವರ ಮನೆಯಲ್ಲಿ ಶೋಧ ನಡೆಸಿದಾಗ, ರೂಮ್ ನಲ್ಲಿ ಬಚ್ಚಿಟ್ಟಿದ್ದ ಆನೆಯ ದವಡೆ ಹಲ್ಲು ಪತ್ತೆಯಾಗಿದೆ. ರಾಜ್ಯದ ಹಲವೆಡೆ ಕೆಲ ಸೆಲೆಬ್ರಿಟಿಗಳು ಗಾಹೂ ರಾಜಕಾರಣಿಗಳಿಗೆ ಹುಲಿ ಉಗುರು ಉರುಳಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅನಾಮಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ, ಶೋಧ ನಡೆಸಿದಾಗ ಆನೆ ದವಡೆ ಹಲ್ಲು ಪತ್ತೆಯಾಗಿದೆ.

ಆರೋಪಿ ಮನೆಯಲ್ಲಿ ಸಿಕ್ಕಿರುವ ದವಡೆಹಲ್ಲು, 2 ಕೆ.ಜಿ. ತೂಕವಿದ್ದು, 17 ಸೆ.ಮೀ ಉದ್ದ, 9 ಸೆ.ಮೀ ಅಗಲವಿದೆ. ಇದು ಮಧ್ಯ ವಯಸ್ಕ ಆನೆಯ ದವಡೆ ಹಲ್ಲು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಬಂಧಿತ ವ್ಯಕ್ತಿ ಹಲವು ವರ್ಷಗಳ ಹಿಂದೆ ಹೆಚ್.ಡಿ. ಕೋಟೆಯಲ್ಲಿ ವ್ಯಕ್ತಿಯೊಬ್ಬರಿಂದ ಈ ಹಲ್ಲು ಪಡೆದಿದ್ದಾಗಿ ಹೇಳಿಕೆ ನೀಡಿದ್ದಾರೆ. ಆನೆ ದವಡೆ ಹಲ್ಲು ಮನೆಯಲ್ಲಿಟ್ಟುಕೊಂಡರೆ ಒಳಿತಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಅಲ್ಲದೆ ಮೈಮೇಲೆ ಆಗುವ ಮಚ್ಚೆಗೆ ಔಷಧಿಯಾಗಿ ಬಳಸುತ್ತಾರೆ ಎಂದು ಹೇಳಲಾಗಿದೆ. ಇದೀಗ ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿದ್ದ ಆನೆ ದವಡೆ ಹಲ್ಲನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.    

ಡಿಸಿಎಫ್ ಡಾ.ಕೆ.ಎನ್ ಬಸವರಾಜು ಮಾರ್ಗದರ್ಶನದಲ್ಲಿ ಎ.ಸಿ.ಎಫ್ ಏನ್. ಲಕ್ಷ್ಮೀಕಾಂತ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸುರೇಂದ್ರ, ಧನ್ಯಶ್ರೀ, ಡಿ ಆರ್ ಎಫ್ ಮೋಹನ್ , ಚಂದ್ರಶೇಖರ್, ಮೋಹನ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನಹಣಕಾಸು ವಿಚಾರದಲ್ಲಿ ಸ್ನೇಹಿತರ ಜಗಳ: ಓರ್ವನ ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನಅಕ್ರಮ ಸಕ್ರಮ ಯೋಜನೆಯಡಿ ಕರ್ತವ್ಯಲೋಪ: ನಾಲ್ವರು ಅಧಿಕಾರಿಗಳ ಅಮಾನತು