ಮಂಡ್ಯ:ಕೆ.ಆರ್.ಪೇಟೆಯ ಲೀಲಾ ಬ್ಯಾಂಕರ್ಸ್ ಅಂಡ್ ಜ್ಯೂವೆಲರಿ ಶಾಪ್ ನಲ್ಲಿ ಆಭರಣ ದೋಚಿದ್ದ ಮೂವರು ಆರೋಪಿಗಳ ಬಂಧನದಿಂದ 11 ಪ್ರಕರಣಗಳು ಬೆಳಕಿಗೆ ಬಂದಿದ್ದು,ಬಂಧಿತರಿಂದ ನಗದು ಸೇರಿ 35.86 ಲಕ್ಷ ಮೌಲ್ಯದ ಬೆಲೆಬಾಳು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.
ಬಂಧಿತರು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 154 ಗ್ರಾಂ ಚಿನ್ನ, 20 ಕೆ.ಜಿ ಬೆಳ್ಳಿಯ ಪದಾರ್ಥಗಳು, ಆಶೋಕ ಲೈಲ್ಯಾಂಡ್ ವಾಹನ, ಏರಿಟಿಕಾ ಕಾರು, ಯಮಹಾ ಆರ್ ಎಕ್ಸ್ ಬೈಕ್ ಲ್ಯಾಪ್ ಟಾಪ್, 8 ಹೆಚ್ ಎಫ್ ಇಲಾತಿ ಹಸುಗಳು, ಎಲ್ ಪಿಜಿ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್,ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಮತ್ತು ನಗದು 40 ಸಾವಿರ ರೂ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ, ಹಲಗೂರು, ಮಂಡ್ಯ ಸೆಂಟ್ರಲ್, ಚನ್ನರಾಯಪಟ್ಟಣ ಗ್ರಾಮಾಂತರ, ಚನ್ನಪಟ್ಟಣ ಗ್ರಾಮಾಂತರ, ಮೈಸೂರಿನ ಉದಯಗಿರಿ ಮತ್ತು ಬನ್ನೂರು ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಆಗಸ್ಟ್ ನಲ್ಲಿ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹೊಳಲು-ಅಕ್ಕಿಹೆಬ್ಬಾಳು ಮುಖ್ಯ ರಸ್ತೆಯ ಲೀಲಾ ಬ್ಯಾಂಕರ್ಸ್ ಅಂಡ್ ಜ್ಯುವಲರಿ ಶಾಪ್ನಲ್ಲಿ ಕಳ್ಳರು ಅಂಗಡಿಯ ಹಿಂಭಾಗದಲ್ಲಿದ್ದ ವೆಂಟಿಲೇಟರ್ ಸರಳನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಗೋಡೆ ಕೊರೆದು ನುಗ್ಗಿ ಶೋಕೇಸ್ನಲ್ಲಿ ವ್ಯಾಪಾರಕ್ಕೆಂದು ಇಟ್ಟಿದ್ದ ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ಮಾಡಿದ್ದರು,
ಈ ಬಗ್ಗೆ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಮತ್ತು ಮಾಲು ಪತ್ತೆ ಬಗ್ಗೆ ಪೊಲೀಸರ ತಂಡವನ್ನು ರಚನೆ ಮಾಡಲಾಗಿತ್ತು, ಪೊಲೀಸರ ತಂಡ ನಾಗಮಂಗಲ ತಾಲ್ಲೂಕು ಬೆಳ್ಳೂರು ಕ್ಲಾಸ್ನ ಉಮರ್ ನಗರದ ಬಳಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಹೆಚ್ಚಿನ ತನಿಖೆಯ ಸಂಬಂಧ ಪೊಲೀಸ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು 11 ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.
ನಾಗಮಂಗಲ ಆರಕ್ಷಕ ಉಪ ಅಧೀಕ್ಷಕ ಲಕ್ಷ್ಮೀನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ದೀಪಕ್,ಜಗದೀಶ್ ಪಿಎಸ್ಐ ಸುನಿಲ್, ಸಿದ್ದಲಿಂಗ ಬಾಣಸೆ, ಮತ್ತು ಸಿಬ್ಬಂದಿಗಳಾದ ಚಂದ್ರಶೇಖರ್ ಎ.ಎಸ್.ಐ. ಬಸವರಾಜು, ರಘು, ಜಯವರ್ಧನ್, ಜೀಸನ್, ಉಮೇಶ್, ಅರುಣ್ ಕುಮಾರ್, ಅವಿನಾಶ್, ಮಂಜು, ಪ್ರದೀಪ, ಪ್ರದೀಪ ಎನ್.ಎಲ್, ರವಿಕಿರಣ್, ಲೋಕೇಶ್,ಉಮೇಶ್, ಷರೀಫ್ ರವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ ಮಾಡಿದ್ದು, ಪೊಲೀಸರ ಸೇವೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದರು.