ಮನೆ ಅಪರಾಧ ಸಿಂಧುತ್ವ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ಉಪತಹಶೀಲ್ದಾರ್‌ ಬಂಧನ

ಸಿಂಧುತ್ವ ಪ್ರಮಾಣ ಪತ್ರ ನೀಡಲು ಲಂಚ ಪಡೆಯುತ್ತಿದ್ದ ಉಪತಹಶೀಲ್ದಾರ್‌ ಬಂಧನ

0

ಬೆಂಗಳೂರು(Bengaluru): ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಸಿಂಧುತ್ವ ಪ್ರಮಾಣ ಪತ್ರ ನೀಡಲು  ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕು ಕಚೇರಿಯ ಉಪತಹಶೀಲ್ದಾರ್‌ ಪಿ.ಎಂ. ಶ್ರೀಕಾಂತ್‌  ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದಿದ್ದಾರೆ.

ರಘುಶಂಕರ್‌ ಎಂಬುವವರು ಯಶವಂತಪುರ ಹೋಬಳಿ ಕೊಡಿಗೆಹಳ್ಳಿಯಲ್ಲಿ ಹೊಂದಿರುವ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿನ ಬಾಬ್ತು ಪರಿಹಾರದ ಮೊತ್ತ ಪಡೆಯಲು ಜಮೀನು ಮಾಲೀಕರು ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಇದಕ್ಕಾಗಿ ಸಿಂಧುತ್ವ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು.

ಶ್ರೀಕಾಂತ್‌ ಅವರನ್ನು ಭೇಟಿಮಾಡಿದ್ದ ರಘುಶಂಕರ್‌, ಸಿಂಧುತ್ವ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿದ್ದರು. ₹ 13 ಲಕ್ಷ ಲಂಚ ನೀಡುವಂತೆ ಅಧಿಕಾರಿ ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು. ನಂತರ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ₹ 45,000 ನೀಡಿದರೆ ಪ್ರಕ್ರಿಯೆ ಪೂರ್ಣ ಗೊಳಿಸುವುದಾಗಿ ಆರೋಪಿ ಅಧಿಕಾರಿ ಹೇಳಿದ್ದರು.

ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಆರೋಪಿಯ ಸೂಚನೆಯಂತೆ ಉಪ ತಹಶೀಲ್ದಾರ್‌ ಕಚೇರಿಗೆ ಗುರುವಾರ ತೆರಳಿದ ದೂರುದಾರರು ಲಂಚದ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಶ್ರೀಕಾಂತ್‌ ಅವರನ್ನು ಬಂಧಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಸೂಚನೆಯಂತೆ ಸಂಸ್ಥೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಮತ್ತು ಬೆಂಗಳೂರು ನಗರ ಎಸ್‌ಪಿ ಅಶೋಕ್‌ ಕೆ.ವಿ. ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಂಕರ ನಾರಾಯಣ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪ್ರಾಥಮಿಕ ತನಿಖೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ಹಿಂದಿನ ಲೇಖನಸರ್ಕಾರಿ ಸರ್ವರ್ ಹ್ಯಾಕ್ ಮಾಡಿ ನಕಲಿ ಆರ್’ಟಿಸಿ ಸೃಷ್ಟಿಸಿ ಭೂಮಿ ಮಾರಾಟ: 6 ಮಂದಿ ಬಂಧನ
ಮುಂದಿನ ಲೇಖನಇಂದಿರಾ ಕ್ಯಾಂಟೀನ್’ಗೆ  ಅನುದಾನ ಕಡಿತ: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ