ಚಿಕ್ಕಬಳ್ಳಾಪುರ : ಜಿಲ್ಲಾ ಕಾರಾಗೃಹದಿಂದ ಕುಖ್ಯಾತ ಕಿಡ್ನಾಪರ್ ಹಾಗೂ ದರೋಡೆಕೋರ ಬಾಂಬೆ ಸಲೀಂ ಹಾಗೂ ಸಹಚರರಿಂದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಸಲೀಂ ಸೇರಿ 9 ಮಂದಿಯನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ರಾತ್ರೋ ರಾತ್ರಿ ಶಿಫ್ಟ್ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜೈಲಿನಿಂದ ಬಳ್ಳಾರಿಯ ಜೈಲಿಗೆ ಬಾಂಬೆ ಸಲೀಂ ನನ್ನ ಶಿಫ್ಟ್ ಮಾಡಲಾಗಿದೆ. ಅಂದಹಾಗೆ ಉಪಹಾರ ನೀಡದೆ ನ್ಯಾಯಾಲಯಕ್ಕೆ ಕಳುಹಿಸಿದ ಆರೋಪ ಮಾಡಿ ಜೈಲು ಮುಖ್ಯ ವೀಕ್ಷಕ ಶಶಿಕುಮಾರ್ ಮೇಲೆ ಹಲ್ಲೆ ಮಾಡಿ, ಬಾಡಿ ವಾರ್ನ್ ಕ್ಯಾಮೆರಾ ಹೊಡೆದು ಹಾಕಿದರು. ಈ ವೇಳೆ ಅಡ್ಡ ಬಂದ ಜೈಲು ಸಹಾಯಕ ಅಧಿಕಾರಿ ಬಳಿ ದಾಸ್ತಾನು ಕೊಠಡಿ ಬೀಗ ಕಸಿದುಕೊಂಡು ಮಲ್ಲಿಕಾರ್ಜುನ್ ರನ್ನ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದರು.
ನಂತರ ಪಾಕಶಾಲೆಯಲ್ಲಿನ ಅಡುಗೆ ಸಿಲಿಂಡರ್ ಹಾಗೂ ಆಗ್ನಿ ನಿರೋಧಕ ಸಿಲಿಂಡರ್ಗಳನ್ನ ತಂದು ಬಿಸಾಡಿದ್ದರು. ಇವರ ಗೂಂಡಾಗಿರಿ ಮಾಹಿತಿ ಮೇರೆಗೆ ಸ್ವತಃ ಕಾರಾಗೃಹ ಇಲಾಖೆ ಡಿಜಿಪಿ ದಿವ್ಯಶ್ರೀ ಚಿಕ್ಕಬಳ್ಳಾಪುರ ಜೈಲಿಗೆ ಆಗಮಿಸಿ ವಿಚಾರಣೆ ಸಹ ನಡೆಸಿದರು.
ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕುಖ್ಯಾತ ರೌಡಿ ಹಾಗೂ ಕಿಡ್ನಾಪರ್, ಮೊಹಮದ್ ಖಲೀಲ್ ಉಲ್ಲಾ ಆಲಿಯಾಸ್ ಬಾಂಬೆ ಸಲೀಂ, ಸಹಚರರಾದ ಆಕಾಶ್, ಸಯ್ಯದ್ ಉಸ್ಮಾನ್, ದಿಲೀಪ್, ಮಹಾದೇವ, ಅಂಬರೀಶ, ವೇಣುಗೋಪಾಲ, ರೇವಂತ್, ಮುಬಾರಕ್ ಷರೀಫ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ 9 ಮಂದಿ ಖೈದಿಗಳನ್ನ ರಾತ್ರೋ ರಾತ್ರಿ ರಾಜ್ಯದ ನಾನಾ ಕಡೆ ಇತರೆ ಜೈಲಿಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.















