ಮನೆ ರಾಜ್ಯ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣರನ್ನು ಸೋಲಿಸಲು ಬಿ.ವೈ.ವಿಜಯೇಂದ್ರ ಷಡ್ಯಂತ್ರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣರನ್ನು ಸೋಲಿಸಲು ಬಿ.ವೈ.ವಿಜಯೇಂದ್ರ ಷಡ್ಯಂತ್ರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

0

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ನಾಯಕರನ್ನು ಸೋಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

2ಎ ಮೀಸಲಾತಿಗೆ ಆಗ್ರಹಿಸಿ ನಡೆಯಲಿರುವ ಪಂಚಮಸಾಲಿ ಪ್ರತಿಭಟನೆಗೂ ಮುನ್ನ ಸೋಮವಾರ ರಾತ್ರಿ ಬೆಳಗಾವಿಯ ಕೂಡಲಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

ಯಡಿಯೂರಪ್ಪ ಹೈಕಮಾಂಡ್​​ ನವರನ್ನು ಬ್ಲ್ಯಾಕ್ ಮೆಲ್ ಮಾಡಿ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೈಕಮಾಂಡ್ ಕೂಡ ಯಾಕೆ ಹೆದರಿತೋ ಗೊತ್ತಿಲ್ಲ. ಸುಮ್ಮನೆ ಶಿಸ್ತು, ಶಿಸ್ತು ಎಂದು ಹೇಳುತ್ತಾರೆ, ನಾವೇನು ಗುಲಾಮರಾ? ನಮ್ಮದೇನು ಶಕ್ತಿ ಇಲ್ಲವೇ, ನಮ್ಮ ಹಿಂದೆಯೂ ಜನ ಇದ್ದಾರೆ. ನೀವೆಲ್ಲ ಗಟ್ಟಿಯಾಗಿ ನಿಲ್ಲಿ, ಎಲ್ಲರನ್ನೂ ಸರಿ ಮಾಡೊಣ ಎಂದು ಯತ್ನಾಳ್ ಹೇಳಿದ್ದಾರೆ.

ಯಡಿಯೂರಪ್ಪ ಬ್ಲ್ಯಾಕ್ ​​ಮೇಲ್ ಮಾಡಿದ್ದರು. ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಜ್ಯದಲ್ಲಿ ಎಲ್ಲಿಯೂ ಹೋಗಲ್ಲ ಎಂದು ಹೆದರಿಸಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡ್ತಿನಿ ಉಳಿದ ಕಡೆ ಹೋಗಲ್ಲ ಎಂದಿದ್ದರು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ಸೋಮಣ್ಣ ಅವರನ್ನು ಸೋಲಿಸಿದ್ದು ಯಾರು? ಲಿಂಗಾಯತರನ್ನು ಅಲ್ಲಿಗೆ ಕಳುಹಿಸಿ ಸೋಮಣ್ಣ ಅವರನ್ನು ಬಲಿ ಕೊಟ್ಟರು. ಸೋಮಣ್ಣ ಅವರನ್ನು ಗೋವಿಂದರಾಜ ನಗರದಲ್ಲಿ 20-25 ಸಾವಿರ ಮತಗಳಿಂದ ಗೆಲ್ಲಿಬೇಕಿತ್ತು. ಆದರೆ ಅವರನ್ನು ಬಲಿಪಶು ಮಾಡಿದರು ಎಂದು ಅವರು ದೂರಿದ್ದಾರೆ.

ಆಶ್ಚರ್ಯ ಎಂದರೆ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು ಎಂದು ಯತ್ನಾಳ್ ಗಂಭೀರ ಆರೋ ಮಾಡಿದ್ದಾರೆ. ಆಶ್ಚರ್ಯ ಎಂದರೆ, ಬೊಮ್ಮಾಯಿ ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ ಈಗ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಬೊಮ್ಮಾಯಿ ಅವರೇ ವಿಜಯೇಂದ್ರ ಹಣ ಕಳುಹಿಸಿದ್ದ ಬಗ್ಗೆ ನನಗೆ ಹೇಳಿದ್ದರು. ಒಮ್ಮೆ ಸತ್ಯ ಹೊರಬರಬೇಕು ರಾಜ್ಯದಲ್ಲಿ. ಅಪ್ಪ, ಮಕ್ಕಳು ಏನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕು ಎಂದು ಅವರು ಕಿಡಿಕಾರಿದ್ದಾರೆ.

ತಮ್ಮ ವಿರುದ್ಧ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡರು. ಅಲ್ಲಿ ಸಿದ್ದರಾಮಯ್ಯಗೆ ಸಪೋರ್ಟ್ ಮಾಡಿದ್ರು. ಕನಕಪುರದಲ್ಲಿ ಅವರಿಬ್ಬರದು ಹೊಂದಾಣಿಕೆ ಇದೆ. ಹಿಂಗೆಲ್ಲ ಮಾಡಿ ನಮ್ಮ ಹೆಸರನ್ನು ಕೆಡಿಸುವ ಪ್ರಯತ್ನ ಮಾಡಿದರು ರಾಜ್ಯದಲ್ಲಿ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನಕ್ಕೊಂದು ಹೇಳಿಕೆ ಕೊಡಲು ಆಗಲ್ಲ: ವಿಜಯೇಂದ್ರ

ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ವಿಜಯೇಂದ್ರ ನಿರಾಕರಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಗಿದು ಟಾಂಗ್ ಕೊಟ್ಟ ವಿಜಯೇಂದ್ರ, ದಿನಕ್ಕೊಂದು ಹೇಳಿಕೆ ಕೊಡಲು ಆಗಲ್ಲ, ಧನ್ಯವಾದ ಎಂದು ತೆರಳಿದರು.

ಹಿಂದಿನ ಲೇಖನಬೆಂಗಳೂರು: ರಾಜಭವನಕ್ಕೆ ಬಾಂಬ್​ ಬೆದರಿಕೆ ಕರೆ
ಮುಂದಿನ ಲೇಖನಕೊಟ್ಟಿಗೆಗೆ ಬೆಂಕಿ: 200 ಕೋಳಿ, 50 ಕುರಿ, 6 ಹಸು ಸಜೀವ ದಹನ