ಮನೆ ರಾಜಕೀಯ ಬೆಂಗಳೂರು ರಸ್ತೆಗುಂಡಿ: ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು ರಸ್ತೆಗುಂಡಿ: ರಾಜ್ಯ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

0

ಬೆಂಗಳೂರು(Bengaluru): ನಗರದ ರಸ್ತೆ ಗುಂಡಿಗಳ ಬಗ್ಗೆ ರಾಜ್ಯ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಇಡೀ ರಾಜ್ಯದಲ್ಲಿನ ಎಲ್ಲ ರಸ್ತೆಗಳು ಗುಂಡಿಗಳಿಂದ ಕೂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ರಸ್ತೆ ಗುಂಡಿಯ ಕಾರಣಕ್ಕೆ ಲುಲೂ ಮಾಲ್ ಸಮೀಪ ಮಹಿಳೆಯೊಬ್ಬರು ಬಿದ್ದು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿವೆ ಎಂದು ಅವರು ಕಿಡಿಕಾರಿದರು.

ಮತ್ತೆ ಬಲಿಯಾದ ವಿಚಾರಕ್ಕೆ  ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಸ್ಥಿತಿ ಇದೆ ಎಂದು ಹೇಳಿದರು.

ಇವತ್ತು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಇಂತಹ ಕಾನ್ಫರೆನ್ಸ್ ಗಳು ಎಷ್ಟೋ ಆಗಿವೆ. ಆದರೆ ಗುಂಡಿಗಳು ಮಾತ್ರ ಮುಚ್ಚಿಲ್ಲ, ಎಲ್ಲವೂ ಹಾಗೆಯೇ ಇವೆ. ಜನರ ಜೀವಗಳನ್ನು ಕಾಪಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಮಳೆ ಬಂದಿರುವುದು ನಿಜ. ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರ್ಕಾರ ಮಾಡಿಕೊಂಡಿಲ್ಲ. ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಅಲ್ಲೆಲ್ಲಾ ಏನೂ ಅಪಾಯ ಆಗಿಲ್ಲ. ತಕ್ಷಣವೇ ಎಲ್ಲವನ್ನೂ ಅಲ್ಲಿನ ಸರ್ಕಾರದವರು ಸರಿ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಂತಹ ಕೆಲಸ ಆಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗ್ತಿಲ್ಲ, ಬದಲಿಗೆ ಗುಂಡಿಗಳ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ವಸೂಲಿ ಮಾಡುವುದೇ ಸರ್ಕಾರದ ಕೆಲಸ:

ಅರಸೀಕೆರೆ ಸಮೀಪ ರಸ್ತೆ ಅಪಘಾತ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಅಗತ್ಯವಾದರೆ ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸಮೀಕ್ಷೆ ಮಾಡಿಸಲಿ. ಅದನ್ನು ಮಾಡುವ ಬದಲು ಈ ಸರ್ಕಾರ ವಸೂಲಿ ಮಾಡುವುದಕ್ಕೆ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಗಳಲ್ಲಿ, ಹೆದ್ದಾರಿ ರಸ್ತೆಯಲ್ಲಿ ಎಎಸ್ ಐ ಸೇರಿ 3-4 ಜನ ಪೊಲೀಸರು ನಿಂತು ಜನರ ವಾಹನಗಳನ್ನು ನಿಲ್ಲಿಸಿ ವಸೂಲಿ ಮಾಡಲು ನಿಂತಿರುತ್ತಾರೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರೂ ಹಂಚಿಕೊಳ್ಳುತ್ತಾರೆ. ವಸೂಲಿ ಮಾಡುವುದಕ್ಕೆ ಈ ಸರ್ಕಾರ ನಿಂತಿದೆ ಎಂದು ಹೆಚ್ ಡಿಕೆ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಪ್ರಾರಂಭವಾಗಿ ಸೋಮವಾರ ಬೆಳಗ್ಗೆವರೆಗೆ ವ್ಯಾಪಾರ, ವಹಿವಾಟು, ಬಾರ್ ಪಬ್ಬಿಗೆ ಎಲ್ಲದ್ದಕ್ಕೂ ಸರಕಾರವೇ ಅವಕಾಶ ಕೊಟ್ಟಿದೆ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋದು ಸರಕಾರವೇ. ಹೋಟೆಲ್ ಗೆ ರಾತ್ರಿ ವೇಳೆ ಅನುಮತಿ ಕೋಡೋದು ಕೂಡ ಸರಕಾರವೇ. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡುವುದು ಕೂಡ ಸರಕಾರವೇ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕುಂಭಮೇಳ ನಡೆಯುತ್ತಿದೆ. ಇನ್ನು ಆ ಕಾರ್ಯಕ್ರಮ ಮುಗಿದೇ ಇಲ್ಲ. ಆದರೆ, ಕುಂಭಮೇಳಕ್ಕೆ ರಸ್ತೆಗೆ ಹಾಕಿದ್ದ ಡಾಂಬಾರು ಆಗಲೇ ಕಿತ್ತು ಹೋಗಿದೆ ಎಂದು ನನಗೆ ಮಾಹಿತಿ ಬಂದಿದೆ. ಸ್ವಾಮೀಜಿಗಳು ಎಲ್ಲರೂ ಅಲ್ಲೇ ಇದ್ದರು. ಡಾಂಬಾರು ಹಾಕಿರುವುದರಲ್ಲಿ  40% ಕಮೀಷನ್ ವ್ಯವಹಾರ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಈ ಸರಕಾರದ ಹಣೆಬರಹ  ಎಂದು ಅವರು ವಾಗ್ದಾಳಿ ನಡೆಸಿದರು.

ಜನರು ಜೆಡಿಎಸ್ ಪರ:

ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಪೈಪೋಟಿ‌ ಇದೆ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಹೀಗಾಗಿ ಆಕಾಂಕ್ಷಿಗಳನ್ನು ಕರೆದು ಮಾತನಾಡುತ್ತಿದ್ದೇವೆ. ಕ್ಷೇತ್ರಗಳಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ಕ್ಷೇತ್ರವಾರು ಆಕಾಂಕ್ಷಿಗಳನ್ನು, ಮುಖಂಡರನ್ನು ಕರೆದು ಚರ್ಚೆ ಮಾಡುತ್ತಿದ್ದೇವೆ. ಎಲ್ಲ ಕಡೆ ಜನರ ಒಲವು ನಮ್ಮ ಪಕ್ಷದ ಕಡೆ ಇದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಮೈಸೂರಿನಲ್ಲಿ ಅಭ್ಯರ್ಥಿಗಳಿಗೆ ಕಾರ್ಯಾಗಾರ:

ಮೈಸೂರಿನಲ್ಲಿ ಇದೇ ಅ. 19-20 ರಂದು ನಮ್ಮ ಪಕ್ಷದ 126 ಅಭ್ಯರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಈ ಕಾರ್ಯಾಗಾರದಲ್ಲಿ ಬಿಡದಿಯಲ್ಲಿ ನಡೆದ ಜನತಾ ಪರ್ವ ಕಾರ್ಯಾಗಾರದಲ್ಲಿ ಕೊಟ್ಟ ಟಾಸ್ಕ್ ಗಳನ್ನು ಪೂರ್ಣ ಮಾಡಿದ್ದಾರಾ? ಇಲ್ಲವಾ? ಎಂಬುದರ ಬಗ್ಗೆ  ಪರಿಶೀಲನೆ  ಮಾಡುತ್ತೇವೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಅಂತ ಸೂಚನೆ ಕೊಡುತ್ತೇವೆ. ಬಿಜೆಪಿ-ಕಾಂಗ್ರೆಸ್ ಭರಾಟೆ ಏನೇ ಇದ್ದರೂ ಜೆಡಿಎಸ್ ಪರ ಜನರ ಭಾವನೆ ಇದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ಕೊಡಬೇಕು ಅಂತ ಜನರ ಮನಸ್ಸಿನಲ್ಲಿ ಇದೆ. ಹೀಗಾಗಿ ಈ ಕಾರ್ಯಾಗಾರ  ಮಹತ್ವವಾಗಿದೆ ಎಂದು ಅವರು ಹೇಳಿದರು.

ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನವೆಂಬರ್ 1ರಿಂದ ಪ್ರಾರಂಭ ಆಗುತ್ತದೆ. 2-3 ಹಂತದಲ್ಲಿ ರಥಯಾತ್ರೆ ಇರುತ್ತದೆ.

ನವೆಂಬರ್ 1 ರಿಂದ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ಪಂಚರತ್ನ ರಥಯಾತ್ರೆ ನಡೆಯುತ್ತದೆ ಎಂದು ತಿಳಿಸಿದರು.

ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ:

ಇತರೆ ಪಕ್ಷಗಳು ನಡೆಸುತ್ತಿರುವ ಚುನಾವಣಾ ಸಮೀಕ್ಷೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೋ ಮಾಡುವ ಸರ್ವೆ ರಿಪೋರ್ಟ್ ನನಗೆ ಮುಖ್ಯ ಅಲ್ಲ. ನನ್ನ ಗುರಿ 123 ಅದಕ್ಕೆ ನಾವು ಕೆಲಸ ಮಾಡುತ್ತೇವೆ ಎಂದರು.

ನಾವು ಕೂಡಾ ಸರ್ವೆ ಮಾಡಿಸುತ್ತಿದ್ದೇವೆ. 30-40 ಕ್ಷೇತ್ರ ಸರ್ವೆ ಆಗಿದೆ. ಅಲ್ಲಿ ಕೆಲ ಗೊಂದಲ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಸರ್ವೆ ರಿಪೋರ್ಟ್ ನಮ್ಮ ಪರ ಇದೆ ಅಂತ ಮೈಮರೆಯೋದು ಬೇಡ. ಸರ್ವೆ ನೆಗೆಟಿವ್ ಇರಲಿ ಪಾಸಿಟಿವ್ ಇರಲಿ. ನಾವು ಚುನಾವಣೆ ಗೆಲ್ಲುವುದಕ್ಕೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮನೆ,ಮನೆಗೆ ಕನ್ನಡ ಬಾವುಟ:

ನವೆಂಬರ್ 1 ರಂದು ನಮ್ಮ ಪಕ್ಷದಿಂದ ಮನೆಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕು. ಬುಧವಾರ ಈ ಸಂಬಂಧ ಶಾಸಕರ ಸಭೆ ಕರೆಯಲಾಗಿದೆ. ಅದರಲ್ಲಿ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮದ ರೂಪುರೇಷೆ ಸಿದ್ದ ಮಾಡುತ್ತೇವೆ ಎಂದರು.

ಚನ್ನಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಬಿಡುಗಡೆ ಮಾಡಿದ್ದ ಹಣ ಸಿ.ಪಿ. ಯೋಗೇಶ್ವರ್ ತಡೆ ಹಿಡಿಯಲು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಇಂತಹ  ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅವರು ಖುಷಿಗೆ ಇಂತಹದ್ದನ್ನು ಮಾಡುತ್ತಿರುತ್ತಾರೆ.

ಇದರಿಂದ ಚನ್ನಪಟ್ಟಣದಲ್ಲಿ ಮತ ಬೀಳೋದಿಲ್ಲ. ಅವರ ಖುಷಿಗೆ ಅದನ್ನು ಮಾಡಿಕೊಳ್ಳಲಿ ಬಿಡಿ ಎಂದು ಪರೋಕ್ಷವಾಗಿ ಯೋಗೇಶ್ವರ್ ವಿರುದ್ದ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.