ಬೆಂಗಳೂರು, ಸೆಪ್ಟೆಂಬರ್ 20, 2024: ಮುಂಗಾರು ಮಳೆ ನಂತರ ಬೆಂಗಳೂರು ನಗರ ಜಿಲ್ಲೆಯ ಹಲವು ಪ್ರದೇಶಗಳ ಬೀದಿ ದೀಪಗಳು, ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಸ್ ಸಮೀಪ ಬೆಳೆದಿರುವ ಮರದ ಕೊಂಬೆಗಳು, ಬಳ್ಳಿ, ಗಿಡಗಳನ್ನು ತೆರವುಗೊಳಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಕ್ಕೆ ಬೆಸ್ಕಾಂ ಕೈ ಜೋಡಿಸಲಿದೆ.
ಟ್ರಾನ್ಸ್ಫಾರ್ಮರ್ಗಳು, ಆರ್ಎಂಯುಗಳು ಮತ್ತು ಎಲ್ಟಿ ಫೀಡರ್ ಪಿಲ್ಲರ್ ಬಾಕ್ಸ್ಗಳಂತಹ ವಿದ್ಯುತ್ ಮೂಲಸೌಕರ್ಯಗಳ ಬಳಿ ಬೆಳೆದಿರುವ ಗಿಡಗಂಟಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬೆಸ್ಕಾಂ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳ ಬಳಿಯಿರುವ ಗಿಡ, ಬಳ್ಳಿ, ಕೊಂಬೆಗಳನ್ನು ತೆರವುಗೊಳಿಸುವುದರಿಂದ ವಿದ್ಯುತ್ ಅಡಚಣೆಯನ್ನು ತಡೆಗಟ್ಟುವುದಲ್ಲದೇ, ಬೆಸ್ಕಾಂ ಮತ್ತು ಬಿಬಿಎಂಪಿಯ ಎಂದಿನ ನಿರ್ವಹಣೆ ಕಾರ್ಯಕ್ಕೂ ಅನುಕೂಲವಾಗಲಿದೆ.
ತೆರವುಗೊಳಿಸಿದ ಗಿಡಗಂಟಿಗಳ ತ್ಯಾಜ್ಯವನ್ನು ಬಿಬಿಎಂಪಿ ಗುರುತಿಸಿದ ಸ್ಥಳದಲ್ಲೇ ವಿಲೇವಾರಿ ಮಾಡಲು ಸೂಚಿಸಲಾಗಿದ್ದು, ತ್ಯಾಜ್ಯ ನಿರ್ವಹಣ ಕಾರ್ಯ ಸರಿಯಾಗಿ ಆಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪ-ವಿಭಾಗಾಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು. ಅಲ್ಲದೇ, ಕೆಲಸ ಆದ ಕುರಿತು ಸಮಗ್ರ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.