ಮನೆ ರಾಜಕೀಯ ಅಕ್ಟೋಬರ್‌ ನಲ್ಲಿ ಕಾಂಗ್ರೆಸ್‌ ನಿಂದ ‘ಭಾರತ್‌ ಜೋಡೋ ಯಾತ್ರೆ’

ಅಕ್ಟೋಬರ್‌ ನಲ್ಲಿ ಕಾಂಗ್ರೆಸ್‌ ನಿಂದ ‘ಭಾರತ್‌ ಜೋಡೋ ಯಾತ್ರೆ’

0

ಉದಯಪುರ (Udaipur)-ಅಕ್ಟೋಬರ್‌ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್‌ ಜೋಡೋ ಯಾತ್ರೆ’ಯನ್ನು (ಭಾರತವನ್ನು ಒಗ್ಗೂಡಿಸಿ ಯಾತ್ರೆ) ನಡೆಸಲು ರಾಜಸ್ಥಾನದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್‌ ನಿರ್ಧರಿಸಿದೆ.

ಚುನಾವಣೆಯಲ್ಲಿ ಸತತ ಸೋಲುಗಳನ್ನು ಎದುರಿಸಿರುವ ಪಕ್ಷದ ಪುನಶ್ಚೇತನಕ್ಕಾಗಿ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಚಿಂತನ ಶಿಬಿರ ನಡೆಯಿತು. ಶಿಬಿರದಲ್ಲಿ ‘ಭಾರತ್‌ ಜೋಡೋ ಯಾತ್ರೆ’ಯನ್ನು ಅಕ್ಟೋಬರ್‌ 2ರಂದು ಆರಂಭಿಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಸೋಲಿನ ಸುಳಿಯಿಂದ ನಾವು ಹೊರಬರಲಿದ್ದೇವೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.

ಉದಯಪುರ ಘೋಷಣೆಯಲ್ಲಿ, ಪಕ್ಷದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಲಾಗಿದೆ. ಒಂದು ವ್ಯಕ್ತಿಗೆ ಒಂದು ಹುದ್ದೆ, ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಮುಂತಾದ ಘೋಷಣೆಗಳು ಇದರಲ್ಲಿ ಸೇರಿವೆ. ಒಂದು ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದರೆ ಅಂಥವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇದೆ. ಒಂದು ವ್ಯಕ್ತಿಯು ಒಂದು ಹುದ್ದೆಯಲ್ಲಿ ಗರಿಷ್ಠ ಐದು ವರ್ಷ ಮಾತ್ರ ಉಳಿಯಬಹುದು.

ಸಂಸತ್ತು ಮತ್ತು ವಿಧಾನಸಭೆಗಳ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇರಿಸುವ ಮಹಿಳಾ ಮೀಸಲು ಮಸೂದೆಯ ಕುರಿತ ನಿಲುವನ್ನು ಕಾಂಗ್ರೆಸ್‌ ಬದಲಾಯಿಸಿಕೊಂಡಿದೆ. ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳಮೀಸಲು ನೀಡಬೇಕು ಎಂಬ ನಿಲುವು ತಳೆದಿದೆ. ಪಕ್ಷದಲ್ಲಿ ಮತ್ತು ಚುನಾವಣೆಯಲ್ಲಿ ಯುವ ಜನರಿಗೆ ಶೇ.50ರಷ್ಟು ಪ್ರಾತಿನಿಧ್ಯಕ್ಕೆ ಒಪ್ಪಿಗೆ ಸಿಕ್ಕಿದೆ.

ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಹಾಳುಗೆಡವಲಾಗಿರುವ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು, ನಿರಂತರ ದಾಳಿಗೆ ಒಳಗಾಗುತ್ತಿರುವ ಸಂವಿಧಾನದ ಮೂಲ ಮೌಲ್ಯಗಳ ರಕ್ಷಣೆಗಾಗಿ ಮತ್ತು ಕೋಟ್ಯಂತರ ಜನರ ನಿತ್ಯದ ಕಳಕಳಿಗಳನ್ನು ಎತ್ತಿ ತೋರಿಸಲು ಭಾರತ್‌ ಜೋಡೋ ಯಾತ್ರೆ ಅಗತ್ಯ ಎಂದು ಸೋನಿಯಾ ಪ್ರತಿಪಾದಿಸಿದರು.

ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಅದರ ಭಾಗವಾಗಿ, ಮೂರು ಘಟಕಗಳನ್ನು ರಚಿಸಲು ನಿರ್ಧರಿಸಲಾಗಿದೆ. ಅವುಗಳೆಂದರೆ, ಸಾರ್ವಜನಿಕ ಒಳನೋಟ ಘಟಕ, ರಾಷ್ಟ್ರೀಯ ತರಬೇತಿ ಸಂಸ್ಥೆ ಮತ್ತು ಚುನಾವಣಾ ನಿರ್ವಹಣೆ ಘಟಕ. ಜಿಲ್ಲಾ ಮಟ್ಟದಲ್ಲಿ ಜೂನ್‌ 15ರಿಂದ ಜನ ಜಾಗರಣ ಅಭಿಯಾನ ಆರಂಭವಾಗಲಿದೆ.