ಮನೆ ರಾಜ್ಯ ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ, ನಟ್ಟು ಬೋಲ್ಟ್ ಹೇಳಿಕೆಗೂ ಸಂಬಂಧವಿಲ್ಲ – ಶಿವರಾಜ್ ತಂಗಡಗಿ

ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ, ನಟ್ಟು ಬೋಲ್ಟ್ ಹೇಳಿಕೆಗೂ ಸಂಬಂಧವಿಲ್ಲ – ಶಿವರಾಜ್ ತಂಗಡಗಿ

0

ಬೆಂಗಳೂರು : ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದಕ್ಕೂ ಡಿಸಿಎಂ ಡಿ.ಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ಬಿಜೆಪಿ, ಜೆಡಿಎಸ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಟ್ಟು ಬೋಲ್ಟ್ ಹೇಳಿಕೆಗೂ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದಕ್ಕೂ ಸಂಬಂಧವಿಲ್ಲ. ಬಿಜೆಪಿ, ಜೆಡಿಎಸ್ ಅವರಿಗೆ ಬೇರೆ ಕೆಲಸ ಇಲ್ಲ. ಹಾಗಾಗಿ ಆರೋಪ ಮಾಡ್ತಾರೆ.

ನರೇಂದ್ರಸ್ವಾಮಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಮಾಲಿನ್ಯ ಮಂಡಳಿಗೆ ನಿಯಮಗಳು ಇವೆ. ಸಿಎಂ, ಸರ್ಕಾರ, ಸಚಿವರಿಗೆ ಯಾರ ಮೇಲೂ ದ್ವೇಷ ಇಲ್ಲ. ನಾವು ಯಾರ ಮೇಲೂ ದ್ವೇಷದ ರಾಜಕೀಯ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಈಗಾಗಲೇ ಹೇಳಿದ್ದಾರೆ. ಕಾನೂನು ರೀತಿ ಕ್ರಮ ಆಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿ ಓಪನ್ ಮಾಡಿಸೋದು ಬೇಡ ಅಂತ ಹೇಳಿದ್ದಕ್ಕೆ ನರೇಂದ್ರಸ್ವಾಮಿ ವಿವರಣೆ ಕೊಟ್ಟಿದ್ದಾರೆ. ಬಿಜೆಪಿ ಅವರು ದ್ವೇಷ ತುಂಬಿಸೋ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಟ ಸುದೀಪ್‌ರನ್ನ ನಾವು ಯಾಕೆ ಟಾರ್ಗೆಟ್ ಮಾಡಬೇಕು. ಶೋ ನಡೆಸೋದಕ್ಕೂ ಟಾರ್ಗೆಟ್ ಮಾಡೋದಕ್ಕೂ ಏನು ಸಂಬಂಧ? ವಾಸ್ತವ ಸತ್ಯದ ಬಗ್ಗೆ ಬಿಜೆಪಿ ಮಾತಾಡಲಿ. ಮನಸ್ಸು ಕೆಡಿಸೋದೇ ಬಿಜೆಪಿಯವರ ಕೆಲಸ. ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿದ್ದಾಗ ಸರಿ ಇದ್ದರು. ಅಲ್ಲಿ ಹೋಗಿ ಏನೇನೋ ಮಾತಾಡ್ತಾ ಇದ್ದಾರೆ ಎಂದು ಟೀಕಿಸಿದ್ದಾರೆ.

ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡೋದು ಹೈಕಮಾಂಡ್ ಬಿಟ್ಟ ವಿಚಾರ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ ಎಂದಿದ್ದಾರೆ.

ಸಿಎಂ ಡಿನ್ನರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಸಿಎಂ ಊಟಕ್ಕೆ ಕರೆಯಬಾರದಾ? ಊಟಕ್ಕೂ ನವೆಂಬರ್ ಕ್ರಾಂತಿಗೂ ಏನು ಸಂಬಂಧ? ಏನು ಸಂಬಂಧವಿಲ್ಲ. ಊಟಕ್ಕೆ ಕರೆದಿದ್ದಾರೆ ಹೋಗ್ತೇವೆ ಅಷ್ಟೇ ಎಂದು ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷದಿಂದ ಅರ್ಜಿ ಹಾಕೋ ಹಾಗೇ ಇಲ್ಲ. ಪ್ರಶಸ್ತಿ ಕೊಡಲು ಸಮಿತಿ ಮಾಡ್ತಾ ಇದ್ದೇವೆ‌. ಸಮಿತಿ ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲಿದೆ. ಈಗಾಗಲೇ ಸಮಿತಿ ರಚನೆ ಆಗಿದೆ.ಇಂದು ಆದೇಶ ಮಾಡ್ತೀವಿ. ಅ.15 ರಂದು ಸಮಿತಿ ಮೊದಲ ಸಭೆ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ವರ್ಷ ಅರ್ಜಿ ಹಾಕದೇ ಸಾಧಕರನ್ನ ಆಯ್ಕೆ ಮಾಡಲು ಪ್ರಯೋಗ ಮಾಡ್ತಾ ಇದ್ದೇವೆ. ಆನ್ ಲೈನ್ ಅರ್ಜಿ, ನಮ್ಮ ಬಳಿ ಬರೋ ಅರ್ಜಿ ಎಲ್ಲವನ್ನು ಸಮಿತಿಗೆ ಕೊಡ್ತೀವಿ. ಸಮಿತಿಯೂ ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ.