ವಿಜಯಪುರ: ರಸ್ತೆಯಲ್ಲಿ ಹೊಗುತ್ತಿದ್ದ ಪಾದಚಾರಿಗಳ ಮೇಲೆ ಬೈಕ್ ಹರಿದು ಮೂವರು ಸಾವಿಗೀಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಜಿಲ್ಲೆಯ ಕುಂಟೋಜಿ ಗ್ರಾಮದಲ್ಲಿ ಸೆ.6ರ ಶುಕ್ರವಾರ ನಡೆದಿದೆ.
ಬೈಕ್ ಚಾಲಕ ತಾಳಿಕೋಟೆ ತಾಲೂಕಿನ ಗೋಟಖಂಡಕಿ ಗ್ರಾಮದ ನಿಂಗರಾಜ ಚೌಧರಿ (22), ಹಿಂಬದಿ ಸವಾರ ದೇವರಹಿಪ್ಪರಗಿ ತಾಲೂಕಿನ ಹಂಚಲಿ ಗ್ರಾಮದ ಅನೀಲ ಖೈನೂರ (23) ಹಾಗೂ ರಸ್ತೆ ಬದಿ ನಿಂತಿದ್ದ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮದ ಉದಯಕುಮಾರ ಪ್ಯಾಟಿ (19) ಮೃತಪಟ್ಟವರು.
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದ್ದು, ಬೈಕ್ ಚಾಲನೆ ಮಾಡುತ್ತಿದ್ದವ ವೇಗವಾಗಿ ಚಾಲನೆ ಮಾಡಿದ್ದರಿಂದ ರಸ್ತೆಬದಿ ನಿಂತಿದ್ದವರ ಮೇಲೆ ಬೈಕ್ ಹರಿದಿದೆ. ಈ ಪರಿಣಾಮ ಅವಘಡ ಸಂಭವಿಸಿದೆ.
ಗಂಭೀರ ಗಾಯಗೊಂಡಿರುವ ಇತರೆ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಲೇ ಮುದ್ದೇಬಿಹಾಳ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.