ಬೆಂಗಳೂರು : ಗ್ಯಾರಂಟಿ ಯೋಜನೆ ಅಧ್ಯಕ್ಷ, ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ನಡೆದಿದೆ.
ರೇವಣ್ಣ ಪುತ್ರ ಶಶಾಂಕ್ ಫಾರ್ಚೂನರ್ ಕಾರ್ ಬೈಕಿಗೆ ಡಿಕ್ಕಿ ಹೊಡೆದು ಸವಾರ ರಾಜೇಶ್ (23) ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ನೂರು ಮೀಟರ್ ಬಳಿ ಕಾರು ಗುದ್ದಿದೆ ಎಂದು ವರದಿಯಾಗಿದೆ.
ನೆನ್ನೆ (ಗುರುವಾರ) ತಡರಾತ್ರಿ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದರು. ಈ ವಿಚಾರ ತಿಳಿದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ ಸನ್ ಫ್ಲವರ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಕಾರಿನಿಂದ ಇಳಿದ ಬಳಿಕ ಶಶಾಂಕ್ ನಾನು ಯಾರು ಗೊತ್ತಾ? ಹೆಚ್ಎಂ ರೇವಣ್ಣ ಪುತ್ರ
ಎಂದು ಅವಾಜ್ ಹಾಕಿದ್ದಾರೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಪರಾರಿಯಾಗಿದ್ದಾರೆ. ಕಾರಿನಲ್ಲಿ ರೇವಣ್ಣ ಕುಟುಂಬಸ್ಥರು ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹಿಟ್ ಆಂಡ್ ರನ್ ವಿಚಾರ ದೊಡ್ಡದಾಗುತ್ತಿದ್ದಂತೆ ತಡರಾತ್ರಿ ಫಾರ್ಚೂನರ್ ಕಾರನ್ನು ಕುದೂರು ಪೊಲೀಸ್ ಠಾಣೆಗೆ ತರಲಾಗಿದೆ ಎಂದು ತಿಳಿದುಬಂದಿದೆ.














