ಮೈಸೂರು : ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ತಿರುಚಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅಧ್ಯಕ್ಷರಾದಾಗ ವಿರೋಧಿಸಿದವರು ಯಾರು? ದೇಶಕ್ಕೆ ಸಂವಿಧಾನ ಸಮರ್ಪಿಸಿದಾಗ ವಿರೋಧಿಸಿದವರು ಯಾರು? ಸಂವಿಧಾನ ಬದಲಿಸಲು ನಾವು ಬಂದಿರುವುದು ಹೇಳಿದ್ದು ಬಿಜೆಪಿ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ. ಪಾರ್ಲಿಮೆಂಟಿನಲ್ಲಿ ಅಂಬೇಡ್ಕರ್ ಮೇಲಿನ ಅಸಹನೆ ಹೊರಹಾಕಿದ್ದು ಗೃಹ ಮಂತ್ರಿ ಅಮಿತ್ ಶಾ ಎಂದು ವಿವರಿಸಿದರು.
ಡಿ.ಕೆ. ಶಿವಕುಮಾರ್ ಅವರು ಸಂವಿಧಾನದ ಪರಿಮಿತಿಯಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಸಂವಿಧಾನದಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡಬಹುದು. ಬದಲಿಸಲು ಅವಕಾಶ ಇಲ್ಲ ಎಂದು ಹೇಳಿದರು. ಇಲ್ಲಿಯವರೆಗೆ ಸಂವಿಧಾನಕ್ಕೆ ೧೦೪ ತಿದ್ದುಪಡಿಗಳಾಗಿವೆ. ಕಾಂಗ್ರೆಸ್ ೭೦, ಬಿಜೆಪಿಯೇತರ ಪಕ್ಷಗಳು ೩೪ ತಿದ್ದುಪಡಿ ಮಾಡಿವೆ. ಸಂವಿಧಾನ ಬದಲು ಮಾಡುವ, ತಿದ್ದುಪಡಿ ಮಾಡುವ ಅಧಿಕಾರ ಇರುವುದು ಪಾರ್ಲಿಮೆಂಟಿಗೆ. ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ? ಬಿಜೆಪಿಯವರಿಗೆ ಈ ಸಂಗತಿಗಳು ತಿಳಿದೇ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದ ಟಾಪ್ ೧೦ ಮಂತ್ರಿಗಳಲ್ಲಿ ಒಬ್ಬರು ಹಿಂದುಳಿದ ವರ್ಗ, ದಲಿತರಿಲ್ಲ. ೨೭ ಒಬಿಸಿ, ಎಸ್ಸಿ, ಎಸ್ಟಿ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ. ಇವರು ಕ್ಯಾಬಿನೆಟ್ ಸಚಿವರಲ್ಲ. ರಾಜ್ಯ ಸಚಿವರಾಗಿದ್ದಾರೆ. ಪ್ರಧಾನಿ ಕಚೇರಿಯ ೧೧೨ ಐಎಎಸ್ ಅಧಿಕಾರಿಗಳು ಒಂದೇ ಸಮುದಾಯದವರಿದ್ದಾರೆ. ಇದಕ್ಕೆ ಉತ್ತರಕೊಡುವಂತೆ ಸವಾಲು ಹಾಕಿದರು. ಇಲ್ಲಿಯವರೆಗೆ ಗುತ್ತಿಗೆಯಲ್ಲಿ ಮೀಸಲಾತಿಯನ್ನು ಶೇ. ೪೩ ಕೊಡಲಾಗಿದೆ. ಎಸ್ಸಿ ಶೇ. ೧೭.೧, ಎಸ್ಟಿ ಶೇ. ೬.೯, ಪ್ರವರ್ಗ ೧- ಶೇ. ೪, ಒಬಿಸಿ ಶೇ. ೧೫, ಈಗ ಅಲ್ಪಸಂಖ್ಯಾತರಿಗೆ ಶೇ. ೪ ಕೊಡಲು ತೀರ್ಮಾನಿಸಲಾಗಿದೆ. ಧರ್ಮದ ಆಧಾರದಲ್ಲಿ ಮೀಸಲು ಕೊಡುತ್ತಿಲ್ಲ. ಬಿಜೆಪಿಯವರು ಇದರ ವಿರುದ್ಧ ಕೋರ್ಟಿಗೆ ಹೋಗುವುದಾಗಿ ಹೇಳಿದ್ದಾರೆ. ಬಳಿಕ ತೀರ್ಮಾನ ಮಾಡಲಾಗುತ್ತದೆ ಎಂದು ವಿವರಿಸಿದರು.kನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಎನ್.ಭಾಸ್ಕರ್, ಸೇವಾದಳದ ಗಿರೀಶ್ ಇದ್ದರು.