ಬೆಂಗಳೂರು : ಮದ್ದೂರು ಗಲಾಟೆ ಪ್ರಕರಣದಲ್ಲಿ ಬಿಜೆಪಿಯವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಮದ್ದೂರು ಚಲೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮದ್ದೂರಿನಲ್ಲಿ ಆಗಿರೋ ಘಟನೆ ಖಂಡನೀಯ. ಎಲ್ಲರೂ ಖಂಡಿಸುತ್ತಾರೆ. ಆದರೆ ಇದಕ್ಕೆ ಕುಮ್ಮಕ್ಕು ಯಾರು ಕೊಟ್ಟಿದ್ದಾರೆ ಅಂತ ಜನರಿಗೆ ಗೊತ್ತಿದೆ. ಅಲ್ಲಿ ಕಲ್ಲು ಎಸೆದರವರು, ಘಟನೆಗೆ ಕಾರಣ ಆಗಿರೋರು ಯಾರು ಅಲ್ಲಿಯವರಲ್ಲ, ಹೊರಗಿನಿಂದ ಬಂದವರು.
ಈಗಾಗಲೇ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿ ತನಿಖೆ ಆಗುತ್ತಿದೆ. ಬಿಜೆಪಿಯವರಿಗೆ ಯಾವುದೇ ತನಿಖೆ ಆಗಬಾರದು. ಇವರೇ ನ್ಯಾಯಾಧೀಶರಾಗಿ ತೀರ್ಪು ಕೊಡುತ್ತಾರೆ. ಬಿಜೆಪಿ ಅವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ಸಾಮರಸ್ಯ ಕಾಪಾಡೋ ಕೆಲಸ ಬಿಜೆಪಿ ಮಾಡಬೇಕು. ಆದರೆ ಸಾಮರಸ್ಯ ಹಾಳು ಮಾಡೋ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಆದಾಗ ಬಿಜೆಪಿಯವರು ಹದ್ದುಗಳ ತರಹ ಕಾಯುತ್ತಿರುತ್ತಾರೆ. ಇಂತಹ ಘಟನೆ ಬಳಸಿಕೊಂಡು ಸಮಾಜದಲ್ಲಿ ಒಡಕು ಮೂಡಿಸೋಕೆ ಕಾಯುತ್ತಿರುತ್ತಾರೆ.
ಹೀಗಾಗಿ ಬಿಜೆಪಿಯವರನ್ನ ಜನ ಗಂಭೀರವಾಗಿ ಪರಿಗಣಿಸಿಲ್ಲ. ಈಗಾಗಲೇ ತನಿಖೆ ಆಗುತ್ತಿದೆ. 22 ಜನರ ಬಂಧನ ಆಗಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಆಗುತ್ತದೆ. ತನಿಖೆ ಬಳಿಕ ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್ಡಿಕೆ
ಕಾಂಗ್ರೆಸ್ ಅಲ್ಪಸಂಖ್ಯಾತ ಒಲೈಕೆ ಮಾಡ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಪಸಂಖ್ಯಾತ, ಬಹುಸಂಖ್ಯಾತರು, ದಲಿತರು ಅಂತ ಅಲ್ಲ. ಎಲ್ಲರಿಗೂ ಸಂವಿಧಾನ, ಕಾನೂನು ಅನ್ವಯ ಆಗುತ್ತದೆ. ಬಿಜೆಪಿಯವರಿಗೂ ಸಂವಿಧಾನ, ಕಾನೂನು ಅನ್ವಯ ಆಗುತ್ತದೆ. ಬಿಜೆಪಿಯವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ತಿರುಗೇಟು ಕೊಟ್ಟರು.
ಮದ್ದೂರು ಗಲಾಟೆ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು ಅಂತ ಆಗ್ರಹ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ತಿರುಗೇಟು ಕೊಟ್ಟ ಅವರು, ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ.ಘಟನೆ ಸಬಂಧ ಎಫ್ಐಆರ್ ದಾಖಲಾಗಿದೆ, ಪೊಲೀಸ್ ತನಿಖೆ ಆಗುತ್ತಿದೆ.
ಈ ಹಂತದಲ್ಲಿ ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ. ಹಾಗೇನಾದರೂ ಅವಶ್ಯಕತೆ ಇದ್ದರೆ ಸರ್ಕಾರ ಅದನ್ನ ನಿರ್ಧಾರ ಮಾಡುತ್ತಾರೆ. ಆದರೆ ಸರ್ಕಾರ ಅಪರಾಧಿಗಳನ್ನ ಬಂಧನ ಮಾಡಿ ಅವರಿಗೆ ಶಿಕ್ಷೆ ಕೊಡಿಸೋ ಕೆಲಸ ಮಾಡುತ್ತದೆ. ಸದ್ಯ ಈಗ ನ್ಯಾಯಾಂಗ ತನಿಖೆ ಅವಶ್ಯಕತೆ ಇಲ್ಲ. ಸರ್ಕಾರ ತನಿಖೆಗೆ ಆದೇಶ ಮಾಡುತ್ತಿದೆ. ಪೊಲೀಸ್ ತನಿಖೆ ಆಗಲಿ ಎಂದರು.














