ನವದೆಹಲಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತಂತೆ ಬಿಜೆಪಿ ನಾಯಕರಿಗೆ ಕನಿಷ್ಠ ಗೌರವವಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಎಎನ್ಐ ಸಂದರ್ಶನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಕುರಿತಂತೆ ಅಮಿತ್ ಶಾ ಹೇಳಿಕೆ ಮತ್ತು ಅದಕ್ಕೆ ಬಿಜೆಪಿಗರ ಸಮರ್ಥನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಬಾಬಾಸಾಹೇಬರನ್ನು ಅವಮಾನಿಸಿದ್ದು ಮಾತ್ರವಲ್ಲದೆ, ಬಿಜೆಪಿ ಇಂದು ಬೆಳಿಗ್ಗೆ ಟ್ವಿಟರ್ನಲ್ಲಿ ಬಾಬಾಸಾಹೇಬರ ತಿರುಚಿದ ಚಿತ್ರವನ್ನು ಹಂಚಿಕೊಂಡಿದೆ. ಇದು ಬಾಬಾಸಾಹೇಬರ ಪ್ರತಿಮೆಯನ್ನು ಧ್ವಂಸ ಮಾಡುವ ಮನಸ್ಥಿತಿಯಾಗಿದೆ. ಬಿಜೆಪಿಗರನ್ನು ಯಾರು ನಂಬುತ್ತಾರೆ? ಮೀಸಲಾತಿಯನ್ನು ಅಂತ್ಯಗೊಳಿಸಲು ಬಯಸುವುದಿಲ್ಲ, ಸಂವಿಧಾನವನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಸಂವಿಧಾನ ರಚಿಸಿದವರಿಗೆ ಅವರು ಗೌರವ ನೀಡುವುದಿಲ್ಲ’ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಇಂಡಿಯಾ ಬಣದ ನಾಯಕರು ಉದ್ಯಮಿ ಜಾರ್ಜ್ ಸೊರೋಸ್ ಚಿತ್ರ ಹಿಡಿದುಕೊಂಡಿರುವಂತಹ ತಿರುಚಿದ ಫೋಟೊವನ್ನು ಬಿಜೆಪಿ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ.
ಈ ಬಗ್ಗೆ ಕಿಡಿಕಾರಿರುವ ಸಂಸದ ಕೆ.ಸಿ. ವೇಣುಗೋಪಾಲ್, ಅಂಬೇಡ್ಕರ್ ಅವರನ್ನು ಅವಮಾನಿಸಿದವರ ವಿರುದ್ಧ ನಾವು ನಡೆಸಿದ ಹೋರಾಟ ಬಿಜೆಪಿಗೆ ತಮಾಷೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಕುರಿತಾದ ಹೇಳಿಕೆ ಖಂಡಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಸಂಜಯ್ ಸಿಂಗ್ ಮುಂತಾದವರು ಅಂಬೇಡ್ಕರ್ ಭಾವಚಿತ್ರ ಹಿಡಿದು ಸಂಸತ್ ಭವನದ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅವರ ಅವಮಾನ ಮತ್ತು ಅಪಹಾಸ್ಯ ಮಾಡುವುದರಲ್ಲೇ ಬಿಜೆಪಿ ತೊಡಗಿಸಿಕೊಂಡಿದೆ. ಅಮಿತ್ ಶಾ ಅವರ ಹೇಳಿಕೆಗಳಿಂದ ಬಾಬಾಸಾಹೇಬ್ ಕೋಟ್ಯಂತರ ಅನುಯಾಯಿಗಳಿಗೆ ಉಂಟಾದ ಅಪಾರ ನೋವಿಗೆ ಗೃಹ ಸಚಿವ ಸ್ಥಾನದಿಂದ ಅಮಿತ್ ಶಾ ಅವರನ್ನು ಕಿತ್ತೊಗೆಯುವ ಬದಲು ಮತ್ತಷ್ಟು ಅಪಹಾಸ್ಯ ಮಾಡುತ್ತಿದೆ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರ ಪರವಾಗಿ ನಿಂತು ಬಿಜೆಪಿಯವರು ಡಾ ಅಂಬೇಡ್ಕರ್ ಅವರ ಪರಂಪರೆಯಂತಹ ಸೂಕ್ಷ್ಮ ವಿಷಯದಲ್ಲೂ ಸುಳ್ಳು ಕಥೆ ಕಟ್ಟುತ್ತಿದೆ’ ಎಂದು ಕಿಡಿಕಾರಿದ್ದಾರೆ.