ಮನೆ ರಾಷ್ಟ್ರೀಯ ಬಿಜೆಪಿ ಭೀಷ್ಮ ಎಲ್​ ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬಿಜೆಪಿ ಭೀಷ್ಮ ಎಲ್​ ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

0

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ಬುಧವಾರ ತಡರಾತ್ರಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ 96 ವರ್ಷದ ಅಡ್ವಾಣಿ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, ಅವರನ್ನು ಜೆರಿಯಾಟ್ರಿಕ್ ವಿಭಾಗದಲ್ಲಿ ನಿಗಾದಲ್ಲಿ ಇರಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Join Our Whatsapp Group

ಅಡ್ವಾಣಿಯವರಿಗೆ ಈ ವರ್ಷ ಮಾರ್ಚ್​ ತಿಂಗಳಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಲಾಗಿತ್ತು. ಆರೋಗ್ಯದ ಕಾರಣದಿಂದ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದಿದ್ದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಸ್ವತಃ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಭಾರತ ರತ್ನ ನೀಡಿ ಗೌರವಿಸಿದ್ದರು.

ಅಡ್ವಾಣಿ ಹಿನ್ನೆಲೆ: ನವೆಂಬರ್ 8, 1927 ರಂದು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ ಅಡ್ವಾಣಿ ಅವರು ಭಾರತ ವಿಭಜನೆ ಸಮಯದಲ್ಲಿ ಮುಂಬೈಗೆ ಬಂದು ನೆಲೆಸಿದ್ದರು ಮತ್ತು ಅಲ್ಲಿಯೇ ಶಿಕ್ಷಣವನ್ನು ಪಡೆದಿದ್ದರು. ಬಳಿಕ 1942ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಸ್ವಯಂಸೇವಕರಾಗಿ ಆರ್‌ಎಸ್‌ಎಸ್‌ಗೆ ಸೇರಿದರು.

1980ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಬಳಿಕ 1986 ರಿಂದ 1990 ರವರೆಗೆ, 1993 ರಿಂದ 1998 ರವರೆಗೆ ಮತ್ತು 2004 ರಿಂದ 2005 ರವರೆಗೆ ಮೂರು ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸುಮಾರು ಐದು ದಶಕಗಳ ಕಾಲ ಸಂಸದೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಅಡ್ವಾಣಿ ಅವರು ವಾಜಪೇಯಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು 1999-2004ರ ಅವಧಿಯಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಲೋಕಸಭೆಯಲ್ಲಿ ಅತಿ ಹೆಚ್ಚು ಕಾಲ ವಿಪಕ್ಷ ನಾಯಕರಾಗಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನು ಹೊರತು ಪಡಿಸಿ ಎಲ್​ ಕೆ ಅಡ್ವಾಣಿ ಅವರು ಅಯೋಧ್ಯೆ ರಾಮಮಂದಿರ ಚಳವಳಿಯಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಮೊದಲ ರಾಮರಥಯಾತ್ರೆಯನ್ನು ಸೆ.25 1990ರಂದು ಗುಜರಾತ್​ನ ಸೋಮನಾಥದಿಂದ ಆರಂಭಿಸಿದ್ದರು. ಅದು ಅಯೋಧ್ಯೆಯಲ್ಲಿ ಕೊನೆಗೊಂಡಿತ್ತು. ಈ ಮೂಲಕ ಅವರ ರಾಮಮಂದಿರ ಚಳವಳಿಯನ್ನು ಜನರ ಬಳಿಗೆ ಕೊಂಡೊಯ್ದಿದ್ದರು. ಆ ಮೂಲಕ ಬಿಜೆಪಿಯ ಕಮಲ ದೇಶದಲ್ಲಿ ಅರಳುವಂತೆ ಮಾಡಿದ್ದರು.

ಹಿಂದಿನ ಲೇಖನಭ್ರಷ್ಟಾಚಾರ ಪ್ರಕರಣ:  ಅರವಿಂದ ಕೇಜ್ರಿವಾಲ್‌ 3 ದಿನ ಸಿಬಿಐ ಕಸ್ಟಡಿಗೆ
ಮುಂದಿನ ಲೇಖನಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ: ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ