ಸೊರಬ (ಶಿವಮೊಗ್ಗ) (shivamogga)- ಬಿಜೆಪಿಗರು ಭ್ರಷ್ಟ, ದುರಾಡಳಿತಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಪಟ್ಟಣದ ಬಂಗಾರಧಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗರು ಭ್ರಷ್ಟ, ದುರಾಡಳಿತಕ್ಕೆ ಇಳಿದಿದೆ. ಪಿಎಸ್ಐ ನೇಮಕದಲ್ಲಿ ಬಹುದೊಡ್ಡ ಹಗರಣ ಮಾಡಿ, ಪ್ರಾಮಾಣಿಕ ತನಿಖೆ ನಡೆಸದೆ ಮರು ಪರೀಕ್ಷೆಗೆ ಮುಂದಾಗಿ ಬಡತನ ಇನ್ನಿತರೆ ಸಮಸ್ಯೆಗಳನ್ನು ಎದುರಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಆಕಾಂಕ್ಷಿಗಳಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದರು.
ಹಗರಣಕ್ಕೆ ಮೂಲ ಕಾರಣರಾದವರು ಅಧಿಕಾರಿಗಳನ್ನು ಬಲಿಪಶು ಮಾಡಿ, ತಪ್ಪಿಸಿಕೊಳ್ಳಲು ಮುಂದಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಜನರು ಕಲಿಸುವ ಪಾಠದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕುಟುಕಿದರು.
ಜನ ಸೇವಕನೆಂಬುದನ್ನು ಮರೆತು ಪರ್ಸಂಟೇಜ್ ರಾಜಕಾರಣ ಹಾಗೂ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಕುಮಾರ್ ಬಂಗಾರಪ್ಪ ಅವರ ರಾಜಕೀಯ ಪಿಕ್ಚರ್ ಕೊನೆಗೊಳ್ಳಲಿದೆ ಎಂದ ಅವರು, ಗುದ್ದಲಿ ಪೂಜೆ ನಡೆಸಿ ಎರಡ್ಮೂರು ವರ್ಷಗಳಾದರೂ ಕಾಮಗಾರಿ ಆರಂಭವಾಗದಿರುವ ಹಿಂದೆ ಅನುದಾನ ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಸುಳ್ಳಿನ ರಾಜಕಾರಣಕ್ಕೆ ಜನ ಮಣೆಹಾಕಬಾರದು. ಕಾಂಗ್ರೆಸ್ನಿಂದ ಮೇ 10ರಂದು ಶಿವಮೊಗ್ಗದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಿಂದ ಅತಿಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.