ಶಿವಮೊಗ್ಗ: ನಾಮಕರಣ ಶಾಸ್ತ್ರಕ್ಕೆ ಹೋಗುವ ವೇಳೆ ಟಂಟಂ ಆಟೋಗೆ ಬೊಲೆರೊ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಂಟಂ ಆಟೋದಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವ ಘಟನೆ ಶಿಕಾರಿಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.
ರಾಮಜೀ ನಾಯ್ಕ(70) ಮೃತರು.
ಶಿಕಾರಿಪುರ ತಾಲೂಕಿನ ಬಿದರಕೊಪ್ಪ ತಾಂಡಾದಿಂದ ಎಳನೀರು ಕೊಪ್ಪ ತಾಂಡಾಕ್ಕೆ ಶಾಸ್ತ್ರಕ್ಕೆ ಹೋಗುವಾಗ ಶಿಕಾರಿಪುರ ತಾಲೂಕು ಜಕ್ಕನಹಳ್ಳಿ ಬಳಿ ಅಪಘಾತವಾಗಿದೆ. ಟಂಟಂ ಆಟೋದಲ್ಲಿ ಹಿಂಬದಿ ಹೊರಗೆ ಕಾಲು ಚಾಚಿಕೊಂಡು ಕುಳಿತುಕೊಂಡಿದ್ದವರ ಕಾಲಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಎಲ್ಲರನ್ನು ತಕ್ಷಣ ಶಿಕಾರಿಪುರದ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆಗೆ ದೌಡಾಯಿಸಿದ ಸಂಸದರು: ಜಕ್ಕನಹಳ್ಳಿಯಲ್ಲಿ ನಡೆದ ಅಪಘಾತದ ಸುದ್ದಿ ತಿಳಿಯುತ್ತಿದ್ದಂತಯೇ ಆಸ್ಪತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಬಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಪಘಾತದ ವಿವರ ಪಡೆದ ಸಂಸದರು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.