ಮೈಸೂರು (Mysuru): ಮೈಸೂರು ಅಮಿಟಿ ಲೇಡೀಸ್ ಸರ್ಕಲ್ ೧೦೮ ಮತ್ತು ಮೈಸೂರು ಅಮಿಟಿ ರೌಂಡ್ಟೇಬಲ್ ೧೫೬ ಜೊತೆಯಾಗಿ ಮಹಾರಾಣಿ ಮಹಿಳಾ ಕಾಮರ್ಸ್ ಮತ್ತು ಮ್ಯಾನೇಜ್’ಮೆಂಟ್ ಕಾಲೇಜು ಸಹಯೋಗದಡಿ ಕಾಲೇಜು ಆವರಣದಲ್ಲಿ ಸ್ತನ ಕ್ಯಾನ್ಸರ್ ಕುರಿತ ಜಾಗೃತಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಅಪೋಲೋ ಆಸ್ಪತ್ರೆಯ ಕ್ಯಾನ್ಸರ್ ರೋಗಶಾಸ್ತç ಶಸ್ತ್ರ ಚಿಕಿತ್ಸಾ ಸಲಹಾ ತಜ್ಞರಾದ ಡಾ.ರಮ್ಯಾ, ಜಾಗತಿಕ ಸ್ತನ ಕ್ಯಾನ್ಸರ್ ಮಾಸ ಕುರಿತು ಜಾಗೃತಿ ಹೆಚ್ಚಿಸುವ ಉಪನ್ಯಾಸ ನೀಡಿದರು.
ಮೈಸೂರು ಅಮಿಟಿ ಲೇಡಿಸ್ ಸರ್ಕಲ್ ೧೦೮ರ ಅಧ್ಯಕ್ಷೆ ಅಪರ್ಣಾರಂಗ ಮಾತನಾಡಿ, ವರ್ಷಗಳಿಂದ ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಿದೆ. ಹಲವಾರು ಪ್ರಕರಣಗಳು ಪತ್ತೆಯಾಗುವುದೇ ಇಲ್ಲ. ಅಥವಾ ಕೊನೆಯ ಹಂತಗಳಲ್ಲಿ ಪತ್ತೆಯಾಗುತ್ತವೆ. ಈ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಎಂದು ಆಚರಿಸುವಾಗ ನಾವು ಈ ದೊಡ್ಡ ಸಮಸ್ಯೆಯ ಬಗ್ಗೆ ತಿಳಿದಿರಬೇಕು. ಹಲವು ಹಂತಗಳಲ್ಲಿ ಸ್ತನ ಕ್ಯಾನ್ಸರ್ ಕುರಿತಂತೆ ಯುವಜನರು ಮತ್ತು ಹಿರಿಯರಿಗೆ ಸಮಾನ ರೀತಿಯಲ್ಲಿ ಶಿಕ್ಷಣ ನೀಡುವ ಅಗತ್ಯವಿದೆ. ಪ್ರತಿ ಮಹಿಳೆಗೆ ಅಗತ್ಯವಿರುವ ಕ್ಯಾನ್ಸರ್ ಪರೀಕ್ಷೆಗಳು ಲಭ್ಯವಾಗುವಂತೆ ಮಾಡಲು, ಮತ್ತು ಆಕೆಗೆ ಅರ್ಹವಾದ ಮಾನಸಿಕ ಬೆಂಬಲ ನೀಡಲು ಈ ವರ್ಷ ನಾವು ಸಿದ್ಧರಿದ್ದೇವೆ. ಪ್ರತಿಯೊಬ್ಬರಿಗೂ ಕ್ಯಾನ್ಸರ್ ಪರೀಕ್ಷೆ ಲಭಿಸಬೇಕೆಂದು ನಾವು ಒಟ್ಟಾಗಿಧ್ವನಿ ಎತ್ತುತ್ತೇವೆ ಎಂದರು.
ಸ್ತನ ಕ್ಯಾನ್ಸರ್, ಆರಂಭದ ಹಂತದಲ್ಲಿಯೇ ಪತ್ತೆಮಾಡುವುದು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅಕ್ಟೋಬರ್ ತಿಂಗಳನ್ನು ಜಾಗತಿಕವಾಗಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ.
ಮೈಸೂರು ಅಮಿಟಿ ರೌಂಡ್ ಟೇಬಲ್ ೧೫೬ ರ ಅಧ್ಯಕ್ಷ ಸೂರಜ್ ಮತ್ತು ಮಹಾರಾಣಿ ಮಹಿಳಾ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಮುಖ್ಯಸ್ಥ ಕೃಷ್ಣ ಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.