ಮನೆ ರಾಜ್ಯ ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್ ನಲ್ಲಿ ಅನುದಾನ: ಸಿಎಂ ಬೊಮ್ಮಾಯಿ

ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್ ನಲ್ಲಿ ಅನುದಾನ: ಸಿಎಂ ಬೊಮ್ಮಾಯಿ

0

ವಿಜಯಪುರ(Vijayapura): ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲು ಹಾಗೂ ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್ ನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಆಯೋಜಿರುವ ಎರಡು ದಿನಗಳ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ, ಪತ್ರಕರ್ತರ ಬೇಡಿಕೆಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಿಕೆಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳ ದರ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಪತ್ರಕರ್ತರನ್ನು ಯಶಸ್ವಿನಿ ಯೋಜನೆ ಸೇರ್ಪಡೆಗೂ ಅಗತ್ಯ ಕ್ರಮಕೈಗೊಳಲಾಗುವುದು ಎಂದರು.ನಗರ, ಪಟ್ಟಣಗಳ ವಸತಿ ಯೋಜನೆಯಲ್ಲಿ ಪತ್ರಕರ್ತರಿಗೆ ನಿವೇಶನ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದರು.

ವಿಧಾನ ಪರಿಷತ್ ಗೆ ಹಿರಿಯ ಪತ್ರಕರ್ತರ ನೇಮಕ ಮಾಡಬೇಕು ಎಂಬ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಧಾನ ಪರಿಷತ್ ಗೆ ನೇಮಕವಾಗಲು ನಮ್ಮಲ್ಲೇ ಪೈಪೋಟಿ ಬಹಳ ಇದೆ. ಆದರೂ, ಅವಕಾಶ ನೀಡಲು ಯೋಚಿಸಲಾಗುವುದು ಎಂದರು.ಪತ್ರಕರ್ತರ ಸಮ್ಮೇಳನ ಎಂಬುದು ಆಧುನಿಕ ಚಿಂತಕರ ಸಮ್ಮೇಳನ ಇದ್ದಂತೆ ಎಂದರು.

ಪತ್ರಕರ್ತರು, ರಾಜಕಾರಣಿಗಳ‌ ನಡುವೆ ಅವಿನಾಭಾವ ಸಂಬಂಧ ಇದೆ.‌ ಅದು ಗಂಡ, ಹೆಂಡತಿ ಸಂಬಂಧ ಇದ್ದಂತೆ ಎಂದು ವ್ಯಾಖ್ಯಾನಿಸಿದರು.

ಪತ್ರಕರ್ತರು, ರಾಜಕಾರಣಿಗಳು ತಮ್ಮ ತಮ್ಮ ಗಡಿ ದಾಟಬಾರದು. ಇಬ್ಬರ ನಡುವೆ ಆರೋಗ್ಯಕರ ಸಂಬಂಧ ಇದ್ದರೆ ರಾಜ್ಯದ ಆರೋಗ್ಯ ಚನ್ನಾಗಿರುತ್ತದೆ ಎಂದರು.

ಪತ್ರಕರ್ತರು ಪ್ರಾದೇಶಿಕವಾಗಬಾರದು, ಅಖಂಡ ಕರ್ನಾಟಕದ ಪತ್ರಕರ್ತರಾಗಬೇಕು. ಉತ್ತರ, ದಕ್ಷಿಣ ಎಂಬ ಬೇಧಬಾವ ಇರಬಾರದು ಎಂದರು.

ಪತ್ರಕರ್ತ ವೃತ್ತಿ ಗಟ್ಟಿ ಗೊಳಿಕೊಳ್ಳಲು ವಿಶ್ವಾರ್ಹತೆ ಮುಖ್ಯ.‌ಅತ್ತ ಎಲ್ಲರೂ ಗಮನಹರಿಸಬೇಕು ಎಂದರು.’ನಾಡಿನ ದೊರೆ’ ಎಂದು ನನ್ನನ್ನು ಕರೆಯಬೇಡಿ, ನನಗೆ ಕಸಿವಿಸಿಯಾಗುತ್ತದೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ವಿತ್ವದಲ್ಲಿ ಇದೆ.‌ ಇಲ್ಲಿ ಪ್ರಜೆಗಳೇ ಪ್ರಭುಗಳು.‌ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಾವು. ಜನ ಸೇವಕನ ಕಾರ್ಯ ನಮ್ಮದು. ಹೀಗಾಗಿ ನಾಡಿನ ದೊರೆ ಎಂದು ಕರೆಯಬೇಡಿ ಎಂದು ವಿನಂತಿಸಿದರು.

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳ. ಇದರಲ್ಲಿ ಇರುವ ಸತ್ವ ಬೇರೆ ಜೋಳದಲ್ಲಿ ಇಲ್ಲ. ವಿಜಯಪುರ ಜೋಳದ ರೀತಿ ಜನರೂ ಸತ್ವಯುತವಾಗಿದ್ದಾರೆ ಎಂದರು.

ಜಿಲ್ಲೆಯ ಕೃಷ್ಣಾ ನದಿ ನೀರು ಐದು ಲಕ್ಷ ಹೆಕ್ಟೇರ್ ಭೂಮಿಗೂ ತಲುಪಬೇಕಿದೆ. ಆಣೆಕಟ್ಟೆ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸಂತ್ರಸ್ತರ ಕನಸು ನನಸಾಗುವಂತೆ ಕೆಲಸ ಎಂದರು.

ಹಿಂದಿನ ಲೇಖನಗ್ರಾಮೀಣ ಭಾಗದ ಪ್ರತೀ ಮನೆ ಬಾಗಿಲಿಗೂ ಆರೋಗ್ಯ ಸೇವೆ: ಗಾಯತ್ರಿ
ಮುಂದಿನ ಲೇಖನಎಚ್’ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ: ಮುಖ್ಯ ಕಾರ್ಯದರ್ಶಿ ವಿರುದ್ಧ ಆರೋಪ ನಿಗದಿಯ ಎಚ್ಚರಿಕೆ ನೀಡಿದ ಹೈಕೋರ್ಟ್