ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಐವರಿಗೆ ಗಂಭೀರ ಗಾಯವಾದ ಘಟನೆ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಕ್ರಾಸ್ ಬಳಿ ನ.4ರ ಶನಿವಾರ ನಡೆದಿದೆ.
ಯಲಹಂಕ ನಿವಾಸಿ ಸುರೇಖಾ (45) ಮೃತ ಮಹಿಳೆ.
ಬೆಂಗಳೂರಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್ ನಲ್ಲಿ ಸುಮಾರು 48ಕ್ಕೂ ಹೆಚ್ಚು ಪ್ರವಾಸಿಗರಿದ್ದು, ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ತೆರಳುತ್ತಿತ್ತು.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಗಿನ ಜಾವ 4:45 ಸಮಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ಜಾಗದಲ್ಲಿ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.
Saval TV on YouTube