ಮನೆ ರಾಜ್ಯ ಆತ್ಮವಿಶ್ವಾಸ, ನಿಶ್ಚಿತ ಗುರಿಯೊಂದಿಗೆ ಸವಾಲು ಎದುರಿಸಲು ಸಾಧ್ಯ: ಸಿಎಂ ಬೊಮ್ಮಾಯಿ

ಆತ್ಮವಿಶ್ವಾಸ, ನಿಶ್ಚಿತ ಗುರಿಯೊಂದಿಗೆ ಸವಾಲು ಎದುರಿಸಲು ಸಾಧ್ಯ: ಸಿಎಂ ಬೊಮ್ಮಾಯಿ

0

ಧಾರವಾಡ: ಭಾರತ ಯುವಶಕ್ತಿಯ ಕಾಲಘಟ್ಟದಲ್ಲಿದ್ದು, ಆತ್ಮವಿಶ್ವಾಸ ಹಾಗೂ ನಿಶ್ಚಿತ ಗುರಿಯೊಂದಿಗೆ ಮುಂದೆ ಸಾಗಿದರೆ ಎಂಥದ್ದೇ ಸವಾಲು ಎದುರಿಸಲು ಸಾಧ್ಯ. ಆ ಮೂಲಕ ಭಾರತವನ್ನೂ ಜಗತ್ತಿನ ಮುಂಚೂಣಿ ರಾಷ್ಟ್ರವನ್ನಾಗಿಸಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸೋಮವಾರ ನಡೆದ ಸಮಾರೋಪದಲ್ಲಿ ಅವರು ಕನ್ನಡದ ನಮಸ್ಕಾರದೊಂದಿಗೆ ಹಿಂದಿಯಲ್ಲಿ ಮಾತನಾಡಿದರು.

ಸಮಯ, ದೇಶ ಹಾಗೂ ಭವಿಷ್ಯ ಯಾರಿಗೂ ಕಾಯುವುದಿಲ್ಲ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಬದಲಾಗಿ ಅದರೊಂದಿಗೆ ಸಾಗಬೇಕು. ದೇಶಕ್ಕಾಗಿ ಜೀವ ಕಾಲ ಗತಿಸಿದೆ. ಈಗ ಏನಿದ್ದರೂ ದೇಶಕ್ಕಾಗಿ ಜೀವನ ನೀಡಬೇಕಾಗಿದೆ  ಎಂದರು.

ಭಾರತೀಯರು ಬುದ್ಧಿಮತ್ತೆಯ ಜತೆಗೆ ಇಲ್ಲಿನ ಸಂಸ್ಕೃತಿ, ಸಂಸ್ಕಾರದಿಂದಲೂ ಶ್ರೀಮಂತರಾಗಿದ್ದಾರೆ. ಜತೆಗೆ ದೇಶದ ಜನಸಂಖ್ಯೆಯೂ ನಮ್ಮ ಶಕ್ತಿಯಾಗಿದೆ. ಬದುಕಿನ ಆಟವನ್ನು ಗೆಲ್ಲುವ ಸಲುವಾಗಿಯೇ ಆಡಬೇಕು. ಇಟ್ಟ ಹೆಜ್ಜೆಯನ್ನು ಹಿಂದಿಡದೆ ಹೋರಾಡಿದರೆ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸಬಹುದು. ಇಡೀ ದೇಶದ ಯುವ ಸಮೂಹವನ್ನು ಒಂದೆಡೆ ಸೇರಿಸುವ ಈ ಯುವಜನೋತ್ಸವದ ಮೂಲಕ ದೇಶದ ಭವಿಷ್ಯವೇ ಹೊಸ ಮನ್ವಂತರದತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಯುವಜನೋತ್ಸವದ ನಂತರ ದೇಶದ ವಿವಿಧ ಪ್ರದೇಶಗಳಿಂದ ಬಂದಿರುವ ಪ್ರತಿನಿಧಿಗಳು ಪರಸ್ಪರ ಸಂಪರ್ಕದಲ್ಲಿದ್ದಲ್ಲಿ ಯುವ ಶಕ್ತಿ ವೃದ್ಧಿಸಲಿದೆ. ಅದರ ಮೂಲಕ ದೇಶದ ಆರ್ಥಿಕತೆ ಹಾಗೂ ಭವಿಷ್ಯ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.

ಕೋವಿಡ್‌–19 ಅನ್ನು ಭಾರತ ಎದುರಿಸಿದ ರೀತಿ ಇಡೀ ಜಗತ್ತನ್ನೇ ಚಕಿತಗೊಳಿಸಿತು. ಹಾಗೆಯೇ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಇದೀಗ ರಫ್ತು ಮಾಡುವ ಮಟ್ಟಿಗೆ ಬೆಳೆದಿದೆ. ಹೀಗಾಗಿ ಭವಿಷ್ಯದಲ್ಲಿ ಭ್ರಷ್ಟಾಚಾರಮುಕ್ತ, ಕಸ ಮುಕ್ತ ಹಾಗೂ ಸ್ತೂಲಕಾಯ ಮುಕ್ತ ಭಾರತವನ್ನು ನಿರ್ಮಿಸುವ ಹೊಣೆ ಯುವಸಮುದಾಯದ ಮೇಲಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಜಿ–20 ಹಾಗೂ ಯುವಜನತೆ ವೈ–20ರ ಕುರಿತು ಕಾರ್ಯಕ್ರಮವನ್ನು ಆಯೋಜಿಸಿ, ಯುವಶಕ್ತಿಯ ಮಹತ್ವವನ್ನು ತಿಳಿಸಲಾಗುವುದು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಪಾಲ ಥಾವರಚಂದ್ ಗೆಹಲೋತ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕ್ರೀಡಾ ಸಚಿವ ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅಮೃತ ದೇಸಾಯಿ ಹಾಗೂ ಅರವಿಂದ ಬೆಲ್ಲದ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಇದ್ದರು.

ಹಿಂದಿನ ಲೇಖನಆಕ್ಸಿಜನ್ ಸಿಲಿಂಡರ್-ಮಾಸ್ಕ್​ ಧರಿಸಿ ದೆಹಲಿ ವಿಧಾನಸಭೆಗೆ ಬಂದ ಬಿಜೆಪಿ ಶಾಸಕರು
ಮುಂದಿನ ಲೇಖನಪ್ರಿಯಾಂಕಾ ಗಾಂಧಿ ನಾ ನಾಯಕಿ ಅಲ್ಲ, ನಾ ನಾಲಾಯಕಿ: ಡಾ.ಅಶ್ವತ್ಥನಾರಾಯಣ್ ವ್ಯಂಗ್ಯ