ತಿರುಪತಿ : ತಿರುಮಲ ತಿರುಪತಿ ದೇವಸ್ಥಾನಂ ಲಡ್ಡು ತುಪ್ಪ ಕಲಬೆರಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ ನೇತೃತ್ವದ ವಿಶೇಷ ತನಿಖಾ ತಂಡ ತನ್ನ ಅಂತಿಮ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದು, ಪವಿತ್ರ ಪ್ರಸಾದವನ್ನು ಕಳಂಕಗೊಳಿಸುವ ಭ್ರಷ್ಟಾಚಾರದ ಜಾಲವನ್ನು ಬಹಿರಂಗಪಡಿಸಿದೆ.
ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಚಾರ್ಜ್ಶೀಟ್ನಲ್ಲಿ ಒಟ್ಟು 36 ಮಂದಿ ಪ್ರಮುಖ ಆರೋಪಿಗಳನ್ನು ಹೆಸರು ನಮೂದಿಸಲಾಗಿದೆ. ಇವರಲ್ಲಿ ಡೈರಿ ಮಾಲೀಕರು, ಮಾಜಿ ಟಿಟಿಡಿ ಅಧಿಕಾರಿಗಳು ಸೇರಿದ್ದಾರೆ. 15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ನಡೆಸಿದ ತೀವ್ರ ತನಿಖೆಯ ನಂತರ ಈ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.

2019 ರಿಂದ 2024 ರವರೆಗೆ ಟಿಟಿಡಿಗೆ ಅಂದಾಜು 250 ಕೋಟಿ ರೂ. ಮೌಲ್ಯದಷ್ಟು ಸರಬರಾಜು ಮಾಡಲಾದ ಸುಮಾರು 68 ಲಕ್ಷ ಕೆಜಿ ನಕಲಿ ತುಪ್ಪ ಶುದ್ಧ ಹಾಲಿನ ತುಪ್ಪದ ಬದಲಿಗೆ ಪಾಮ್ ಆಯಿಲ್, ಕರ್ನಲ್ ಆಯಿಲ್, ರಾಸಾಯನಿಕ ಮಿಶ್ರಣಗಳು, ಪ್ರಾಣಿ ಕೊಬ್ಬು ಮತ್ತು ಇತರ ಕಡಿಮೆ ದರದ ಮಿಶ್ರಣಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಲಾಗಿತ್ತು. ಇದು ಶುದ್ಧ ತುಪ್ಪದಂತೆ ಕಾಣುವಂತೆ ಮಾಡಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.
ಉತ್ತರಾಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿ (ನಿರ್ದೇಶಕರು ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್) ಈ ನಕಲಿ ತುಪ್ಪದ ರಾಕೇಟ್ನ ಮುಖ್ಯ ಕೇಂದ್ರ ಎಂದು ತನಿಖೆ ಗುರುತಿಸಿದೆ. ವೈಷ್ಣವಿ ಡೈರಿ (ಸಿಇಒ ಅಪೂರ್ವ ವಿನಾಯಕಾಂತ್ ಚಾವ್ಡಾ), ಎಆರ್ ಡೈರಿ (ಎಂಡಿ ಆರ್ ರಾಜಶೇಖರನ್), ದೆಹಲಿಯ ವ್ಯಾಪಾರಿ ಅಜಯ್ ಕುಮಾರ್ ಸುಗಂಧ್ (ರಾಸಾಯನಿಕ ಸರಬರಾಜುದಾರ), ಮಾಜಿ ಟಿಟಿಡಿ ಅಧಿಕಾರಿಗಳಾದ ಪ್ರಳಯ ಕಾವೇರಿ ಮುರಳಿ ಕೃಷ್ಣ, ಆರ್ಎಸ್ಎಸ್ವಿಆರ್ ಸುಬ್ರಹ್ಮಣ್ಯಂ ಮತ್ತು ಇತರರು ಪ್ರಮುಖ ಆರೋಪಿಗಳು ಎಂದು ತನಿಖೆ ಗುರುತಿಸಿದೆ.















