ಮನೆ ರಾಜಕೀಯ ಚನ್ನಪಟ್ಟಣ ಉಪ ಚುನಾವಣೆ ಮೈತ್ರಿ ಅಭ್ಯರ್ಥಿ ನಾನೇ: ಸಿ.ಪಿ.ಯೋಗೇಶ್ವರ್ ವಿಶ್ವಾಸ

ಚನ್ನಪಟ್ಟಣ ಉಪ ಚುನಾವಣೆ ಮೈತ್ರಿ ಅಭ್ಯರ್ಥಿ ನಾನೇ: ಸಿ.ಪಿ.ಯೋಗೇಶ್ವರ್ ವಿಶ್ವಾಸ

0

ಚನ್ನಪಟ್ಟಣ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮುಖಂಡರು ನನ್ನ ಹೆಸರನ್ನ ಅಂತಿಮಗೊಳಿಸುತ್ತಾರೆ. ನನಗೆ ಪಕ್ಷದ ವರಿಷ್ಠರ ಮೇಲೆ ವಿಶ್ವಾಸ ಇದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುಧವಾರ ಹೇಳಿಕೆ ನೀಡಿದ್ದಾರೆ.

Join Our Whatsapp Group

ಕಾರ್ಯಕರ್ತರ  ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್, ನಾನು ಈ ಉಪಚುನಾವಣೆಯಲ್ಲಿ ಕಣದಲ್ಲಿರುತ್ತೇನೆ.ಕುಮಾರಸ್ವಾಮಿ ಅವರೇ ಟಿಕೆಟ್ ಕೊಡೋದು.ನಾನು ಎರಡು ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಬಹುತೇಕ ಇನ್ನೆರಡು ದಿನಗಳಲ್ಲಿ ಹೆಸರು ಘೋಷಣೆ ಆಗಲಿದೆ. ನಾವು ಹಿಂದೆ ಬಹಳ ಸಾರಿ ಕುಮಾರಸ್ವಾಮಿ ಜತೆ ಮಾತನಾಡಿದ್ದೇನೆ. ನಮ್ಮ ರಾಜ್ಯ ನಾಯಕರು, ಕೇಂದ್ರ ನಾಯಕರ ಬಳಿಯೂ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತೆ. ಈಗಾಗಲೇ ಸಾಕಷ್ಟು ಸರ್ವೆ ಆಗಿದೆ, ಎಲ್ಲಾ ಸರ್ವೆಯಲ್ಲೂ ನನ್ನ ಹೆಸರೇ ಬಂದಿದೆ. ಆದ್ಯತೆ ಮೇಲೆ ಕೊಟ್ಟರು ಸಹ ನನಗೇ ಟಿಕೆಟ್ ಕೊಡಬೇಕು ಎಂದರು.

ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದಕ್ಕೆ ಈಗಲೇ ಏನೂ ಪ್ರತಿಕ್ರಿಯೆ ನೀಡಲ್ಲ.ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರು ಏನು ಹೇಳ್ತಾರೋ ಅದರ ಮೇಲೆ ತೀರ್ಮಾನ ಆಗುತ್ತದೆ.ಆದರೆ ನಾನು ದುಡುಕುವ ಅವಶ್ಯಕತೆ ಇಲ್ಲ.ಬಿಜೆಪಿ-ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ನಾನೇ ಆಗುತ್ತೇನೆ.ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಕುಮಾರಸ್ವಾಮಿ ಆಚರು ಒಕ್ಕಲಿಗ ನಾಯಕರನ್ನ ತುಳಿಯುತ್ತಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ”ಆ ರೀತಿ ಏನೂ ಇಲ್ಲ, ಕಳೆದ 15 ವರ್ಷದಿಂದ ಇಲ್ಲಿ ನಾನು ಪಕ್ಷ ಕಟ್ಟಿದ್ದೇನೆ. ನಾನು ಇಲ್ಲಿ ಇರಲೇಬೇಕು, ನಾನಿದ್ದರೆ ಇಲ್ಲಿ ಬಿಜೆಪಿ ಬೆಳೆಯುವ ವಾತಾವರಣ ಬರುತ್ತದೆ .ನಾವು ಮೈತ್ರಿ ಆದಮೇಲೂ ಒಬ್ಬರ ಯೋಗಕ್ಷೇಮವನ್ನ ಒಬ್ಬರು ನೋಡಿಕೊಳ್ಳಬೇಕು. ಆ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ನನ್ನನ್ನೇನು ಕುಮಾರಸ್ವಾಮಿ ತುಳಿಯುತ್ತಿಲ್ಲ ಎಂದರು.

ಟಿಕೆಟ್ ಸಿಗದಿದ್ದರೂ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾನು ಈಗಲೇ ಏನೂ ಹೇಳಲ್ಲ.ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷದ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಪಕ್ಷ ಹೇಳಿದ ರೀತಿ ನಡೆದುಕೊಳ್ಳುತ್ತೇವೆ. ಮೈತ್ರಿ ಅಭ್ಯರ್ಥಿಗೆ ಯಾರೇ ಆದ್ರೂ ಸಪೋರ್ಟ್ ಮಾಡಿ ಅಂತ ಪಕ್ಷ ಹೇಳಿದ್ರೆ ಮಾಡಬೇಕಾಗುತ್ತೆ. ನಮ್ಮ ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳಬೇಕಾಗುತ್ತದೆ. ಪಕ್ಷದ ಕಾರ್ಯಕರ್ತನಾಗಿ ನಾನು ಬಕಪಕ್ಷಿ ರೀತಿ ಕಾಯುತ್ತಿ ದ್ದೇನೆ. ಪಕ್ಷ ನನ್ನ ಹೆಸರು ಘೋಷಣೆ ಮಾಡಿದ ತತ್ ಕ್ಷಣ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಅಂತ ಸಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು ಅಂದರೆ ನಾನು ಇರಬೇಕು. ಈ‌ ಭಾಗದಲ್ಲಿ ಬಿಜೆಪಗೆ ನಾನೇ ಸೀನಿಯರ್ ಈಗ. ನಾನು ಇರಬೇಕು ಎಂಬುದು ನನ್ನ ಬಯಕೆ, ಪಕ್ಷವೂ ಇದನ್ನೇ ಬಯಸುತ್ತೆ. ಪಕ್ಷ ಅಷ್ಟುಬೇಗ ನಮ್ಮನ್ನ ಬಿಡಲ್ಲ. ಕುಮಾರಸ್ವಾಮಿ ಕೂಡಾ ಪ್ರಜ್ಞಾವಂತರಿದ್ದಾರೆ. ಕಾದುನೋಡಿ ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡುತ್ತಾರೆ. ಚಿಹ್ನೆ ಯಾವುದಾದರೂ ಇರಲಿ ಮುಂದೆ ನೋಡೊಣ ಎಂದರು.