ಮನೆ ದೇವಸ್ಥಾನ ಹೊಯ್ಸಳರ ಶಿಲ್ಪಕಲೋಪಾಸನೆಗೆ ಸಾಕ್ಷಿಯಾಗಿ ನಿಂತ ಭವ್ಯ ದೇಗುಲ ಬೇಲೂರಿನ ಚೆನ್ನಕೇಶ್ವರ ದೇವಾಲಯ

ಹೊಯ್ಸಳರ ಶಿಲ್ಪಕಲೋಪಾಸನೆಗೆ ಸಾಕ್ಷಿಯಾಗಿ ನಿಂತ ಭವ್ಯ ದೇಗುಲ ಬೇಲೂರಿನ ಚೆನ್ನಕೇಶ್ವರ ದೇವಾಲಯ

0

ಬೇಲೂರು ಎಂದೊಡನೆ, ಮೌನ ಕಾವ್ಯಕನ್ನಿಕೆಯರನ್ನು ಕಲ್ಲಿನಲ್ಲಿ ಅರಳಿಸಿದ ಖ್ಯಾತ ಶಿಲ್ಪಿ ಜಕಣಾಚಾರಿ ಕಣ್ಣೆದುರು ನಿಲ್ಲುತ್ತಾನೆ. ಯಗಚಿ ನದಿಯ ದಂಡೆಯಲ್ಲಿ, ಪಶ್ಚಿಮಘಟ್ಟಗಳ ಶ್ರೇಣಿಯ ಇಳಿಜಾರಿನಲ್ಲಿರುವ ಬೇಲೂರು ನೈಸರ್ಗಿಕ ಕಾನನದಿಂದ ಸುತ್ತುವರಿದಿದೆ. ಹಸಿರು ಸಿರಿಯ ನಡುವೆ ಇರುವ ಈ ಅರೆ ಮಲೆನಾಡು ಪ್ರದೇಶ ಹೊಯ್ಸಳ ಅರಸರ ಹೆಮ್ಮೆಯ ರಾಜಧಾನಿಯಾಗಿ, ಶಿಲ್ಬಕಲೆಗಳ ತವರಾಗಿ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಕಂಗೊಳಿಸಿದೆ.

ಹಿಂದೆ ವೇಲಾಪುರ ಎಂದು ಕರೆಸಿಕೊಂಡ ಬೇಲೂರಿನ ಚೆನ್ನಕೇಶ್ವರ ದೇವಾಲಯ ವಿಷ್ಣುವರ್ಧನ ತಲಕಾಡಿನ ಚೋಳರ ಮೇಲೆ ವಿಜಯ ಸಾಧಿಸಿದ ಸಂಕೇತವಾಗಿ ತಲಕಾಡು, ಮೇಲುಕೋಟೆ, ತೊಣ್ಣೂರು, ಗದಗ ಹಾಗೂ ಬೇಲೂರಿನಲ್ಲಿ ಕಟ್ಟಿದ ಐದು ದೇವಾಲಯಗಳ ಪೈಕಿ ಇದೂ ಒಂದು ಎಂದು ಪ್ರತೀತಿ.

ತಲಕಾಡುಗೊಂಡ ಎಂದೇ ಖ್ಯಾತನಾಗಿದ್ದ ವಿಷ್ಣುವರ್ಧನ 20 ಮಾರ್ಚ್ 1117ರಲ್ಲಿ ಈ ದೇವಾಲಯ ಪ್ರತಿಷ್ಠಾಪಿಸಿದ ಎಂದು ಶಾಸನ ಸಾರುತ್ತದೆ. ವಿಷ್ಣುವರ್ಧನ ವಿಜಯದ ಸಂಕೇತವಾಗಿ ಕಟ್ಟಿಸಿದ ಈ ದೇಗುಲದಲ್ಲಿನ ಶಿಲ್ಪಕಲೆಗಳು ಅದ್ವಿತೀಯ.

ಬೇಲೂರಿನ ಚೆನ್ನಕೇಶವ ದೇಗುಲಕ್ಕೆ ಅದುವೇ ಸಾಟಿ. ನಕ್ಷತ್ರಾಕಾರದ 32 ಕೋನಗಳ ಶ್ರೀಚಕ್ರ ರೂಪದ ಜಗಲಿಯ ಮೇಲೆ ನಿರ್ಮಿಸಲಾಗಿರುವ ಸುಂದರ ದೇವಾಲಯದ ಭಿತ್ತಿಗಳಲ್ಲಿ ಆನೆಗಳು, ಪುರಾಣ, ಪುಣ್ಯ ಕಥೆಗಳಿವೆ. ಇಲ್ಲಿರುವ ನರ್ತಿಸುತ್ತಿರುವ ಶಿಲಾಬಾಲಕಿಯರು ಕನ್ನಡ ನಾಡಿನ ಹೆಮ್ಮೆಯ ಶಿಲ್ಪಿಗಳ ಕಲಾಪ್ರೌಢಿಮೆಯನ್ನು ಎತ್ತಿಹಿಡಿಯುತ್ತವೆ. ಮೂರೂವರೆ ಅಡಿ ಎತ್ತರದ ಪೀಠದ ಮೇಲೆ ನಿಂತಿರುವ 9 ಅಡಿ ಎತ್ತರದ ಮಣಿಮಕುಟ, ಮಕರಕುಂಡಲ, ಕಟಿಬಂಧಗಳಿಂದ ಅಲಂಕೃತನಾದ ಶಂಖ, ಚಕ್ರ, ಗದಾ, ಪದ್ಮ ಹಿಡಿದ ಚೆನ್ನಕೇಶವನ ಸುಂದರ ಸೌಮ್ಯ ಮೂರ್ತಿಯ ಚೆಲುವು ಚೆನ್ನ ಕೇಶವ ಎಂಬ ಹೆಸರಿಗೂ ಅನುರೂಪವಾಗಿದೆ.

ದೇಗುಲದ ನವರಂಗದಲ್ಲಿ ಭುವನೇಶ್ವರಿಗೆ ಆಧಾರವಾದ ಕಂಬಗಳ ಮೇಲೆ ಇರುವ 42 ಮದನಿಕೆ ವಿಗ್ರಹಗಳು ಅತ್ಯಂತ ಸುಂದರವಾಗಿದ್ದು ಬೇಲೂರು ಶಿಲಾಬಾಲಿಕೆಯರು ಎಂದೇ ಇದು ಖ್ಯಾತವಾಗಿದೆ. ದರ್ಪಣ ಸುಂದರಿ, ಕಲ್ಲಿನಲ್ಲೇ ಚಿಗುರುತ್ತಿರುವಂತೆ ಕಾಣುವ ತರುಲತೆಗಳು, ಕುಪ್ಪಳಿಸಲು ಸಿದ್ಧವಾಗಿರುವಂತಿರುವ ಕಪ್ಪೆಯುಳ್ಳ ಚೆನ್ನಿಗರಾಯನ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ.

ಕಪ್ಪೆ ಚೆನ್ನಿಗರಾಯ ದೇವಾಲಯವನ್ನು 1117ರಲ್ಲಿ ವಿಷ್ಣುವರ್ಧನ ಪಟ್ಟದರಸಿ ಶಾಂತಲೆ ಕಟ್ಟಿಸಿದಳೆಂದು ಶಾಸನ ಹೇಳುತ್ತದೆ. ಎಲ್ಲ ದೇವಾಲಯಗಳ ನವರಂಗಗಳ ಮೇಲ್ಛಾವಣಯ ಸುಂದರ ಶಿಲ್ಪಕಲೆ, ಪ್ರತಿಯೊಂದು ಕಂಬಗಳಲ್ಲಿಯೂ ಇರುವ ವೈವಿಧ್ಯತೆ ಸೂಕ್ಷ್ಮವಾಗಿ ಗಮನಿಸಲೇಬೇಕಾದ ಕೆತ್ತನೆಗಳಿಂದ ಕೂಡಿದೆ. ಒಂದು ಕಂಬ ಮತ್ತೊಂದು ಕಂಬಕ್ಕಿಂತ ವಿಭಿನ್ನವಾಗಿದ್ದು ಮನಸೂರೆಗೊಳ್ಳುತ್ತವೆ. ಗುರುಗಳು ಹೊಯ್ ಎಂದೊಡನೆ ಹುಲಿಯನ್ನು ಕೊಂದ ಸಳನನ್ನೇ ಲಾಂಛನ ಮಾಡಿಕೊಂಡ ಹೊಯ್ಸಳರ ಲಾಂಛನ ಮನಸೂರೆಗೊಳ್ಳುತ್ತದೆ. ತನ್ನ ಸೌಂದರ್ಯವನ್ನು ತಾನೇ ನೋಡುತ್ತಾ ಮೈಮರೆತು ನಿಂತ ದರ್ಪಣ ಸುಂದರಿ, ಗಿಣಿಗೆ ಹಣ್ಣು ಕೊಟ್ಟು ಮಾತು ಕಲಿಸುತ್ತಿರುವ ಶುಕ ಸುಂದರಿ, ಯುವತಿಯ ವಸ್ತ್ರ ಎಳೆಯುತ್ತಿರುವ ಮಂಗ ಮೊದಲಾದ ಕೆತ್ತನೆಗಳು ಅತ್ಯಂತ ಮನೋಹರವಾಗಿವೆ.

ಅಂದ ಹಾಗೆ ಚೆನ್ನಿಗರಾಯ ದೇಗುಲವನ್ನು ಖ್ಯಾತ ಶಿಲ್ಪಿ ಜಕಣಾಚಾರಿ ನಿರ್ಮಿಸಿದನೆಂದೂ, ಇದರಲ್ಲಿದ್ದ ದೋಷವನ್ನು ಜಕಣನ ಮಗ ಡಕಣಾಚಾರಿ ತೋರಿಸಿದಾಗ ಜಕಣ ತನ್ನ ಬಲಗೈ ಕತ್ತರಿಸಿಕೊಂಡ. ತುಮಕೂರು ಬಳಿಯ ಕೈದಾಳದಲ್ಲಿ ಜಕಣ ಕೇಶವ ದೇಗುಲ ನಿರ್ಮಿಸಿದಾಗ ಮತ್ತೆ ಅವನ ಕೈ ಬೆಳೆಯಿತು ಎಂಬ ಐತಿಹ್ಯವಿದೆ. ಬೇಲೂರು ಬೆಂಗಳೂರಿನಿಂದ 120 ಹಾಗೂ ಹಾಸನದಿಂದ 35 ಕಿ.ಮೀಟರ್ ದೂರದಲ್ಲಿದೆ.

ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.